ನವದೆಹಲಿ: ಇಡೀ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿರುವ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪತ್ರ ನಾಲ್ಕು ಸದಸ್ಯರ ಸತ್ಯ ಶೋಧ ಸಮಿತಿಯನ್ನು ನೇಮಕ ಮಾಡಿದೆ.
ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷ ಸೋನಿಯಾಗಾಂಧಿ ಅವರು ಮಂಗಳವಾರ ಕಾಂಗ್ರೆಸ್ ಪಕ್ಷದ ಆಂತರಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ನಾಲ್ಕು ಸದಸ್ಯರ ಸತ್ಯ ಶೋಧ ಸಮಿತಿ ಜೆಎನ್ ಯು ಹಿಂಸಾಚಾರದ ಕುರಿತು ಮಾಹಿತಿ ಕಲೆಹಾಕಿ ಇನ್ನೊಂದು ವಾರದಲ್ಲಿ ತನ್ನ ವರದಿ ಸಲ್ಲಿಕೆ ಮಾಡಲಿದೆ ಎಂದು ತಿಳಿದುಬಂದಿದೆ.
ಜೆಎನ್ ಯು ಕ್ಯಾಂಪಸ್ ನಲ್ಲಿ ಈ ಸಮಿತಿ ಪರಿಪೂರ್ಣ ಮತ್ತು ಕೂಲಂಕುಷ ತನಿಖೆ ನಡೆಸಲಿದ್ದು, ತನಿಖೆ ಬಳಿಕ ಈ ಸಮಿತಿ ತನ್ನ ವರದಿಯನ್ನು ಪಕ್ಷಕ್ಕೆ ಸಲ್ಲಿಕೆ ಮಾಡಲಿದೆ. ಮೂಲಗಳ ಪ್ರಕಾರ ಈ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್, ಮಾಜಿ ಎನ್ಎಸ್ಯುಐ ಅಧ್ಯಕ್ಷ ಅಮೃತ ಧವನ್, ಸಂಸದ ಹಿಬಿ ಈಡನ್ ಮತ್ತು ಸಂಸದ ಸೈಯದ್ ನಾಸೀರ್ ಹುಸೇನ್ ಅವರು ಇರಲಿದ್ದಾರೆ.
ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯು)ದ ಕ್ಯಾಂಪಸ್ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಸಂಜೆ ಕೆಲವು ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವಿದ್ಯಾರ್ಥಿಗಳ ಹಾಸ್ಟೆಲ್ಗೆ ಪ್ರವೇಶಿಸಿ ಕಲ್ಲು, ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಜೆಎನ್ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಸಂಬಂಧದ ವೀಡಿಯೋ ವೈರಲ್ ಆಗಿದೆ.