ದೇಶ

ಕಹಿ ಘಟನೆಗಳ ಮರೆತು, ಕ್ಯಾಂಪಸ್ ಗೆ ವಾಪಸ್ ಆಗಿ: ವಿದ್ಯಾರ್ಥಿಗಳಿಗೆ ಜೆಎನ್ ಯು ವಿಸಿ ಮನವಿ

Srinivasamurthy VN

ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕಹಿ ಘಟನೆ.. ಅದನ್ನು ಮರೆತು ವಿದ್ಯಾರ್ಥಿಗಳು ಮತ್ತೆ ವಿಶ್ವ ವಿದ್ಯಾಲಯಕ್ಕೆ ವಾಪಸ್ ಆಗಬೇಕು ಎಂದು ವಿವಿಯ ವೈಸ್ ಚಾನ್ಸಿಲರ್ ಎಂ ಜಗದೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಇತ್ತ ವಿದ್ಯಾರ್ಥಿಗಳ ವಿರೋಧ ಮತ್ತು ಫ್ಯಾಕಲ್ಟಿ ಸದಸ್ಯರ (ಅಧ್ಯಾಪಕರು) ತೀವ್ರ ವಿರೋಧ ಎದುರಿಸುತ್ತಿರುವ ಜೆಎನ್ ಯು ಉಪ ಕುಲಪತಿ ಎಂ ಜಗದೀಶ್ ಕುಮಾರ್ ಅವರು, ಕ್ಯಾಂಪಸ್ ಗೆ ವಾಪಸ್ ಆಗುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಜಗದೀಶ್ ಕುಮಾರ್ ಅವರು, 'ಕ್ಯಾಂಪಸ್ ನಲ್ಲಿನ ಹಿಂಸಾಚಾರದಿಂದಾಗಿ ನಮಗೆ ಅತೀವ ನೋವಾಗಿದೆ. ಗಾಯಗೊಂಡ ವಿದ್ಯಾರ್ಥಿಗಳು ಶೀಘ್ರ ಚೇತರಿಕೆ ಕಾಣಲಿ. ಕ್ಯಾಂಪಸ್ ಅವರಣದಲ್ಲಿ ಹಿಂಸಾಚಾರವಾಗಿದ್ದು ದುರದೃಷ್ಟಕರ. ವಿವಿ ಎಂದಿಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಪ್ರದೇಶವಾಗಿತ್ತು. ಮುಂದೆಯೂ ಕೂಡ ಇರಲಿದೆ. ಈ ವಿಶ್ವಾಸವನ್ನು ನಾನು ವಿದ್ಯಾರ್ಥಿಗಳಿಗೆ ನೀಡುತ್ತೇನೆ. ಹಳೆಯ ಕಹಿ ಘಟನೆಗಳನ್ನು ಮರೆತು ವಿದ್ಯಾರ್ಥಿಗಳು ಕ್ಯಾಂಪಸ್ ಗೆ ವಾಪಸ್ ಆಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾನುವಾರ ಸಂಜೆ ವಿವಿ ಆವರಣಕ್ಕೆ ನುಗ್ಗಿದ ಮುಸುಕುಧಾರಿ ದುಷ್ಕರ್ಮಿಗಳು ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿದ್ದರು. ಈ ವೇಳೆ ಜೆಎನ್ಎಸ್ ಯುಐ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ದಾಳಿಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

SCROLL FOR NEXT