ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ 5ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ 9 ವಿದ್ಯಾರ್ಥಿಗಳಿಗೆ ನೊಟೀಸ್ ಜಾರಿ ಮಾಡಿದೆ. ಶಂಕಿತರನ್ನು ನಾಳೆ ವಿಚಾರಣೆಗೆ ದೆಹಲಿ ಪೊಲೀಸರು ಕರೆದಿದ್ದಾರೆ.
ನೊಟೀಸ್ ಪಡೆದಿರುವ ವಿದ್ಯಾರ್ಥಿನಿಯರು ವಿಚಾರಣೆಗೆ ಯಾವ ದಿನಾಂಕ ಮತ್ತು ಸಮಯದಂದು ಬರಲಾಗುತ್ತದೆ ಎಂದು ತಿಳಿಸಬೇಕೆಂದು ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿನಿಯರಿಗೆ ಮಹಿಳಾ ಪೊಲೀಸ್ ಅಧಿಕಾರಿ ವಿಚಾರಣೆ ನಡೆಸುತ್ತಾರೆ. ಇತರರಿಗೆ ದೆಹಲಿಯ ಕಮಲಾ ನಗರದಲ್ಲಿರುವ ಅಪರಾಧ ವಿಭಾಗದ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಹಿಂಸಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು 9 ಶಂಕಿತರ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ಅವರಲ್ಲಿ 7 ಮಂದಿ ಜೆಎನ್ ಯುಎಸ್ ಯು ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಎಡಪಂಥೀಯರಾಗಿದ್ದು ಇಬ್ಬರು ಎಬಿವಿಪಿಯವರಾಗಿದ್ದಾರೆ. ಇವರನ್ನು ಸಿಸಿಟಿವಿ ದೃಶ್ಯಾವಳಿ ಮೂಲಕ ಗುರುತಿಸಿ ನೊಟೀಸ್ ಜಾರಿ ಮಾಡಲಾಗಿದೆ.