ದೇಶ

ಭೀಮ್ ಆರ್ಮಿ ಮುಖ್ಯಸ್ಥ ಜೈಲಿನಿಂದ ಬಿಡುಗಡೆ, ಕೋರ್ಟ್ ಷರತ್ತು ಉಲ್ಲಂಘಿಸಿ ಜಾಮಾ ಮಸೀದಿ ಬಳಿ ಮತ್ತೆ ಪ್ರತಿಭಟನೆ

Lingaraj Badiger

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಗುರುವಾರ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಶುಕ್ರವಾರ ಬೆಳಗ್ಗೆ ಜಾಮಾ ಮಸೀದಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಸೇರಿಕೊಂಡಿದ್ದಾರೆ.

ಕಳೆದ ಬುಧವಾರ ದೆಹಲಿ ಕೋರ್ಟ್ ಚಂದ್ರಶೇಖರ್ ಆಜಾದ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಶುಕ್ರವಾರ ರಾತ್ರಿ 9 ಗಂಟೆಯೊಳಗೆ ದೆಹಲಿ ತೊರೆಯುವಂತೆ ಮತ್ತು ಮುಂದಿನ ನಾಲ್ಕು ವಾರಗಳ ಕಾಲ ದೆಹಲಿಯಲ್ಲಿ ಯಾವುದೇ ಧರಣಿ ನಡೆಸದಂತೆ ಷರತ್ತು ವಿಧಿಸಿದೆ.

ನಿನ್ನೆ ರಾತ್ರಿ ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ, ಇಂದು ಬೆಳಗ್ಗೆ ಕೋರ್ಟ್ ಷರತ್ತು ಉಲ್ಲಂಘಿಸಿ, ಜಾಮಾ ಮಸೀದಿ ಬಳಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಆಜಾದ್ ಸಂಘಟನೆ ಕಳೆದ ಡಿಸೆಂಬರ್ 20ರಂದು ಪೊಲೀಸರ ಅನುಮತಿ ಪಡೆಯದೆ ಸಿಎಎ ವಿರುದ್ಧ ಜಾಮಾ ಮಸೀದಿಯಿಂದ ಜಂತರ್ ಮಂತರ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

SCROLL FOR NEXT