ದೇಶ

ನಿರ್ಭಯಾ ಪ್ರಕರಣ: ಪವನ್‌ ಕುಮಾರ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ, ಅತ್ಯಾಚಾರಿಗೆ ಗಲ್ಲು ಫಿಕ್ಸ್‌

Lingaraj Badiger

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಅತ್ಯಾಚಾರಿಗಳಿಗೂ ಗಲ್ಲು ಶಿಕ್ಷೆ ಮತ್ತೊಮ್ಮೆ ಕಾಯಂ ಆಗಿದೆ.

2012ರಲ್ಲಿ ಅತ್ಯಾಚಾರ ನಡೆದಾಗ ತಾನು ಅಪ್ರಾಪ್ತನಾಗಿದ್ದೆ ಎಂದು ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಪವನ್‌ ಕುಮಾರ್‌ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಪವನ್ ಕುಮಾರ್ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿ(ಎಸ್‌ಎಲ್‌ಪಿ)ಯಲ್ಲಿ ಯಾವುದೇ ಹೊಸ ಆಧಾರವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೆ, ಅಪರಾಧದ ಸಮಯದಲ್ಲಿ ತಾನು ಬಾಲಾಪರಾಧಿ ಎಂದು ಪವನ್ ಹೇಳಿಕೊಂಡಿದ್ದನ್ನು ದೆಹಲಿ ಹೈಕೋರ್ಟ್ ಸಹ ತಿರಸ್ಕರಿಸಿತ್ತು.

ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪವನ್ ಕುಮಾರ್ ಗುಪ್ತಾ ಅವರ ಮನವಿಯ ಕುರಿತು ನ್ಯಾಯಮೂರ್ತಿ ಆರ್ ಬಾನುಮತಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು.

2012ರ ಡಿಸೆಂಬರ್‌ನಲ್ಲಿ ಅಪರಾಧ ನಡೆದ ಸಮಯದಲ್ಲಿ ಪವನ್‌ ಕುಮಾರ್‌ ಗುಪ್ತಾ ಅಪ್ರಾಪ್ತನಾಗಿದ್ದ ಮತ್ತು ಈ ಮನವಿಯನ್ನು ದೆಹಲಿ ಹೈಕೋರ್ಟ್ ತಪ್ಪಾಗಿ ವಜಾಗೊಳಿಸಿದೆ ಎಂದು ಗುಪ್ತಾ ಪರ ವಕೀಲರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಆರ್ ಬಾನುಮತಿ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡಿದ್ದರು.

SCROLL FOR NEXT