ಮುಂಬೈ(ಮಹಾರಾಷ್ಟ್ರ): ಭಾರತದೊಳಗೆ ಪ್ರವೇಶಿಸಿದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಸಲ್ಮಾನರನ್ನು ದೇಶದಿಂದ ಹೊರಗಟ್ಟಬೇಕು ಎಂದು ಶಿವಸೇನೆ ಹೇಳಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ದೇಶದೊಳಗೆ ಅಕ್ರಮವಾಗಿ ಒಳನುಸುಳಿದ ಪಾಕಿಸ್ತಾನೀಯರನ್ನು ದೇಶದಿಂದ ಹೊರಹಾಕಲು ಫೆಬ್ರವರಿ 9ರಂದು ಮುಂಬೈಯಲ್ಲಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ ನಂತರ ಪಕ್ಷ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ರೀತಿ ಹೇಳಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಹಿಂದುತ್ವ ಬಗ್ಗೆ ರಾಜ್ ಠಾಕ್ರೆ ನಿಲುವಿನಲ್ಲಿ ಆದ ಬದಲಾವಣೆ ಬಗ್ಗೆ ಸಹ ಸಾಮ್ನಾದಲ್ಲಿ ಶಿವಸೇನೆ ಕಿಡಿಕಾರಿದೆ.
'''ಈಗ ಎಂಎನ್ಎಸ್ ಸಿಎಎಗೆ ಬೆಂಬಲ ನೀಡುತ್ತಿದೆ ಎಂದಿದೆ. ಒಂದು ತಿಂಗಳ ಹಿಂದೆ ಅದು ವಿರೋಧ ವ್ಯಕ್ತಪಡಿಸುತ್ತಿತ್ತು. ನಮ್ಮ ಪಕ್ಷ ಹಿಂದುತ್ವ ಬಗ್ಗೆ ಯಾವತ್ತಿಗೂ ತನ್ನ ತತ್ವ, ಸಿದ್ದಾಂತದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಮರಾಠಿಗರ ಪರವಾಗಿ ಕೆಲಸ ಮಾಡುವುದೇ ನಮ್ಮ ಗುರಿಯಾಗಿದೆ. ಹೀಗಾಗಿಯೇ ರಾಜ್ಯದ ಜನತೆ ನಮ್ಮನ್ನು ಸ್ವೀಕರಿಸಿ ಅಧಿಕಾರ ನೀಡಿದ್ದಾರೆ, ರಾಜ್ ಠಾಕ್ರೆ ನಿಲುವಿನಲ್ಲಿ ಆದ ಬದಲಾವಣೆಯನ್ನು ಜನರು ಒಪ್ಪುತ್ತಾರೆಯೇ, ಕೆಲವರು ಹಿಂದುತ್ವವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಕೆಲವು ಪಕ್ಷಗಳು ಈ ರೀತಿ ಮಾಡಿದರೂ ಅದನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ನಮ್ಮಲ್ಲಿದೆ'' ಎಂದು ಶಿವಸೇನೆ ಹೇಳಿದೆ.