ದೇಶ

ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಲಿರುವ ಗಣರಾಜೋತ್ಸವ ಪರೇಡ್

Manjula VN

ನವದೆಹಲಿ: ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಗಣರಾಜ್ಯೋತ್ಸವದ ವಿಶೇಷವೆಂದರೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆರಂಭವಾಗುವ ರಾಜಪಥದಲ್ಲಿ ನಡೆಯುವ ಮೆರವಣಿಗೆಯಾಗಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. 

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ. ಪ್ರಧಾನಿ ಮೋದಿಯವರು ಸಶಸ್ತ್ರ ಪಡೆಗಳ ಮುಖ್ಯಸ್ಥ ಮತ್ತು ಮೂರು ಸೇನಾ ಮುಖ್ಯಸ್ಥರ ಜೊತೆಗೂಡಿ ಇಂಡಿಯಾ ಗೇಟ್ ಸಮೀಪವೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. 

ಇದೇ ಮೊದಲ ಬಾರಿ ಸಶಸ್ತ್ರ ಪಡೆಯ ಮುಖ್ಯಸ್ಥರು ಗಣರಾಜ್ಯೋತ್ಸವ ವೇಳೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳನ್ನು ಪ್ರತಿನಿಧಿಸಲಿದ್ದಾರೆ. ಸೇನಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಜ.ಬಿಪಿನ್ ರಾವತ್ ಅವರು ಜ.1 ರಂದು ದೇಶದ ಮೊದಲ ಸಶಸ್ತ್ರ ಪಡೆಯ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಂಡಿದ್ದರು. ಮೂರು ಸೇನೆಗಳಿಗೆ ಸಂಬೂಂಧಿಸಿದಂತೆ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸುವ ಸಲುವಾಗಿ ಇತ್ತೀಚೆಗಷ್ಟೇ ಈ ಹುದ್ದೆಯನ್ನು ಸೃಷ್ಟಿಸಲಾಗಿತ್ತು. 

ಭಾರತ ಕಳೆದ ವರ್ಷ ಮಿಷನ್ ಶಕ್ತಿ ಹೆಸರಿನಲ್ಲಿ ಅಂತರಿಕ್ಷದಲ್ಲಿಯೇ ಉಪಗ್ರವನ್ನು ಛೇದಿಸಬಲ್ಲ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿತ್ತು. ಈ ಸಾಧನೆ ಮಾಡಿದ ಅಮೆರಿಕಾ, ರಷ್ಯಾ ಚೀನಾ ಹಾಗೂ ಚೀನಾ ಸಾಲಿಗೆ ಬಾರತ ಸೇರ್ಪಡೆಯಾಗಿತ್ತು. ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಈ ಕ್ಷಿಪಣಿ ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ. 

ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ ಅಪಾಚೆ ಹಾಗೂ ಚಿನೂಕ್ ಹೆಲಿಕಾಪ್ಟರ್ ಗಳು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೊದಲ ಬಾರಿ ಹಾರಾಟ ನಡೆಸಲಿವೆ. 3 ಚಿನೂಕ್ ಹೆಲಿಕಾಪ್ಟರ್ ಗಳು ರಾಜಪಥದ ಮೇಲೆ ಹಾರಾಟ ಕೈಗೊಳ್ಳಲಿವೆ. ಬಳಿಕ ಅಪಾಚೆ ಹೆಲಿಕಾಪ್ಟರ್ ಗಳು ಹಿಂಬಾಲಿಸಲಿವೆ. ಇದೇ ವೇಳೆ ಭಾರತೀಯ ವಾಯುಪಡೆಯ ಟ್ಯಾಬ್ಲೋನಲ್ಲಿ ರಫೇಲ್ ಯುದ್ಧ ವಿಮಾನದ ಮಾದರಿಯನ್ನು ಪ್ರದರ್ಶಿಸಲಾಗುತ್ತದೆ. 

ದೇಶಿ ಬೋಪೋರ್ಸ್ ಎಂದೇ ಹೆಸರಾಗಿರುವ ಧನುಷ್ ಫಿರಂಗಿಗಳು ಗಣರಾಜ್ಯೋತ್ಸವದ ವೇಳೆ ಪ್ರಮುಖ ಆಕರ್ಷಣೆ ಎನಿಸಲಿವೆ. ಸ್ವದೇಶಿ  ನಿರ್ಮಿತ ಈ ಫಿರಂಗಿಯನ್ನು ಪರೇಡ್ ನಲ್ಲಿ ಮೊದಲ ಬಾರಿ ಪ್ರದರ್ಶಿಸಲಾಗುತ್ತಿದೆ. ಏರ್ ಡಿಫೆನ್ಸ್ ಟೆಕ್ನಿಕಲ್ ಕಂಟ್ರೋಲ್ ರಾಡಾರ್ ಅನ್ನು ಕೂಡ ಪರೇಡ್ ನಲ್ಲಿ ಪ್ರದರ್ಶಿಸಲಾಗುತ್ತದೆ ಇದೇ ವೇಳೆ ಸ್ವದೇಶಿ ನಿರ್ಮಿತ ಕೆ-9 ವಜ್ರ ಟ್ರಾಂಕರ್ ಕೂಡ ಪ್ರದರ್ಶನಗೊಳ್ಳಲಿದೆ. 

ಮಹಿಳೆಯರ ಸಿಆರ್'ಪಿಎಫ್ ಬೈಕ್ ಸವಾರರ ತಂಡ ಗಣರಾಜ್ಯೋತ್ಸವ ವೇಳೆ ಮೊದಲ ಬಾರಿ ಸಾಹಸ ಪ್ರದರ್ಶನ ನೀಡಲಿದೆ. 65 ಸದಸ್ಯರ ಈ ತಂಡ ರಾಯಲ್ ಎನ್'ಫೀಲ್ಡ್ ಬುಲೆಟ್ ಬೈಕಿನಲ್ಲಿ ಚಮತ್ಕಾರಿಕ ಕೌಶಲ್ಯಗಳನ್ನು ಪ್ರದರ್ಶಿಸಲಿದೆ. ಜೊತೆಗೆ ಈ ಬಾರಿ ಪರೇಡ್ ನಲ್ಲಿ ಕ್ಯಾ ತಾನಿಯಾ ಶೇರ್ಗೀಲ್ ಪುರುಷರ ಪಥ ಸಂಚಲನವನ್ನು ಮುನ್ನಡೆಸಲಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಪ್ರದೇಶವೆಂದು ಘೋಷಿಸಲಾಗಿದೆ. ಹಾಗಾಗಿ ಈ ಗಣರಾಜ್ಯೋತ್ಸವದಲ್ಲಿ ಜಮ್ಮು ಕಾಶ್ಮೀರವು ಮೊದಲ ಬಾರಿ ಕೇಂದ್ರಾಡಳಿತ ಪ್ರದೇಶವಾಗಿ ಭಾಗವಹಿಸಲಿದ್ದು, ಅಲ್ಲಿನ ಸ್ತಬ್ಧ ಚಿತ್ರವು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಸಂಚರಿಸಲಿದೆ. 

ಇನ್ನು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಬಸವಣ್ಣನವರ ಅನುಭವ ಮಂಟಪದ ಸ್ತಬ್ಧ ಚಿತ್ರ ಈ ಬಾರಿ ಕರ್ನಾಟಕವನ್ನು ಪ್ರತಿನಿಧಿಸಲಿದೆ. 12ನೇ ಶತಮಾನದಲ್ಲಿ ಸಾಮಾಜಿ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣನವರ ಪರಿಕಲ್ಪನೆ ರಾಜಪಥದಲ್ಲಿ ಅನಾವರಣಗೊಳ್ಳಲಿದೆ. 

SCROLL FOR NEXT