ದೇಶ

ಕೇರಳ ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ: ವಿರೋಧ ಪಕ್ಷ ಶಾಸಕರಿಂದ ರಾಜ್ಯಪಾಲರಿಗೆ 'ಗೋ ಬ್ಯಾಕ್' ಘೋಷಣೆ 

Sumana Upadhyaya

ತಿರುವನಂತಪುರ: ಬುಧವಾರ ಬೆಳಗ್ಗೆ ಕೇರಳ ವಿಧಾನಸಭೆಯಲ್ಲಿ ನಾಟಕೀಯ ವಿದ್ಯಮಾನ ನಡೆಯಿತು. ಇಂದು ಬೆಳಗ್ಗೆ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಸಾಂಪ್ರದಾಯಿಕವಾಗಿ ಸರ್ಕಾರದ ಯೋಜನೆಗಳ ಕುರಿತು ಭಾಷಣ ಮಾಡಲು ಆಗಮಿಸಿದರು. ಸದನದ ಬಾವಿಗೆ ಬರುತ್ತಿದ್ದಂತೆ ವಿರೋಧ ಪಕ್ಷ ಯುಡಿಎಫ್ ಶಾಸಕರು ಅವರನ್ನು ಸುತ್ತುವರಿದು ಗೋ ಬ್ಯಾಕ್ ಗವರ್ನರ್, ಗೋ ಬ್ಯಾಕ್ ಗವರ್ನರ್ ಎಂದು ಘೋಷಣೆಗಳನ್ನು ಕೂಗಿದರು.


ಗವರ್ನರ್ ಅವರನ್ನು ಸದನಕ್ಕೆ ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಕರೆದುಕೊಂಡು ಬಂದಿದ್ದರು. ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯಿಂದಾಗಿ ಸದನದ ಬಾವಿಯೊಳಗೆ ರಾಜ್ಯಪಾಲರು ಸುಮಾರು 10 ನಿಮಿಷಗಳ ಕಾಲ ನಿಂತು ನಂತರ ಸದನದ ಭದ್ರತೆಗಾರರ ರಕ್ಷಣೆಯೊಂದಿಗೆ ಭಾಷಣ ಮಾಡಲು ಸ್ಪೀಕರ್ ವೇದಿಕೆಯತ್ತ ತೆರಳಿದರು.


ಕೇರಳ ವಿಧಾನಸಭೆಯಲ್ಲಿ ಈ ರೀತಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತಿರುವುದು ಇದೇ ಮೊದಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಕೇರಳ ವಿಧಾನಸಭೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಇತ್ತೀಚೆಗೆ ಸದನದಲ್ಲಿ ನಿರ್ಣಯ ಹೊರಡಿಸಿದ್ದರು.

ಕೇರಳ ರಾಜ್ಯದಲ್ಲಿ ವಿರೋಧ ಪಕ್ಷ ಯುಡಿಎಫ್ ಕೂಡ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ವಿಶೇಷ. 
SCROLL FOR NEXT