ದೇಶ

ರೋಗಿ ಮನೆ ಬಳಿ ಚಿಕಿತ್ಸೆ ಕಲ್ಪಿಸುವ ‘ಧನ್ವಂತರಿ ರಥ್’ ಯೋಜನೆ ದೇಶಾದ್ಯಂತ ಜಾರಿಗೊಳಿಸಬೇಕು: ಪ್ರಧಾನಿ ಮೋದಿ

Lingaraj Badiger

ನವದೆಹಲಿ: ದೇಶದಲ್ಲಿನ ಕೋವಿಡ್- ೧೯ ಪರಿಸ್ಥಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಪರಿಶೀಲನೆ ನಡೆಸಿದರು. 

ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ ವರ್ಧನ್, ನೀತಿ ಆಯೋಗದ ಸದಸ್ಯರು, ಸಂಪುಟ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕೋವಿಡ್ ಪ್ರಸ್ತುತ ಪರಿಸ್ಥಿತಿ, ಕೈಗೊಳ್ಳುತ್ತಿರುವ ಜಾಗೃತ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಈ ಸಭೆಯಲ್ಲಿ ಪರಿಶೀಲಿಸಿದರು.

ಕೊರೋನಾ ವೈರಸ್ ಸಾಂಕ್ರಾಮಿಕದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯುವಂತೆ ವ್ಯಾಪಕ ಪ್ರಮಾಣದಲ್ಲಿ ಜಾಗೃತಿ, ಪ್ರಚಾರ ನಡೆಸಬೇಕೆಂದು ಸೂಚಿಸಿದರು. ಸಾಂಕ್ರಾಮಿಕವನ್ನು ಸಮರ್ಥವಾಗಿ ತಡೆಗಟ್ಟುತ್ತಿರುವ ಕೇಂದ್ರ, ರಾಜ್ಯ, ಸ್ಥಳೀಯ ಅಧಿಕಾರಿಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಪ್ರಶಂಸಿಸಿದರು. 

ಗುಜರಾತ್ ಅಹಮದಾಬಾದ್ ನಗರದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ಧನ್ವಂತರಿ ರಥ್ ಕಾರ್ಯಕ್ರಮ ಇತರ ಪ್ರದೇಶಗಳಲ್ಲೂ ಜಾರಿಗೊಳಿಸಿದರೆ ಉತ್ತಮವಾಗಿರುತ್ತದೆ ಎಂದು ಪ್ರಧಾನಿ ಸೂಚಿಸಿದರು.

ದೇಶದ ವಿವಿಧ ಪ್ರದೇಶಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಪರಿಶೀಲಿಸಿದರು. ರಾಜ್ಯಗಳು ಯಾವ ರೀತಿ ಸನ್ನದ್ದವಾಗಿವೆ ಎಂಬುದನ್ನು ತಿಳಿದುಕೊಂಡರು. ಸಾರ್ವಜನಿಕ ಪ್ರದೇಶಗಳಲ್ಲಿ ವ್ಯಕ್ತಿಗತ ಸ್ವಚ್ಚತೆ, ಸಮೂಹ ವರ್ತನೆಗಳು ಹೆಚ್ಚಿನ ಎಚ್ಚರಿಕೆಯಿಂದ ಕೂಡಿರಬೇಕು ಎಂದು ಸೂಚಿಸಿದರು. ಕೋವಿಡ್ ಬಗ್ಗೆ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಒತ್ತಿ ಹೇಳಿದರು.

ಜನರಿಗೆ ವೈರಸ್ ಸೋಂಕು ತಗುಲದಂತೆ ಕಠಿಣ ಕ್ರಮಗಳನ್ನು ಮುಂದುವರಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಯಾವುದೇ ಆಸ್ಪದ ಇಲ್ಲ ಎಂದು ಪ್ರಧಾನಿ ತಾಕೀತು ಮಾಡಿದರು. 

ದೆಹಲಿಯಲ್ಲಿ ಸಾಂಕ್ರಾಮಿಕವನ್ನು ಅತ್ಯಂತ ಸಮರ್ಥವಾಗಿ ತಡೆಯುತ್ತಿರುವ ಕೇಂದ್ರ, ರಾಜ್ಯ, ಸ್ಥಳೀಯ ಹಂತದ ಅಧಿಕಾರಿಗಳನ್ನು ಪ್ರಧಾನಿ ಪ್ರಶಂಸಿಸಿದರು. ರಾಷ್ಟ್ರ ರಾಜಧಾನಿ ಪ್ರದೇಶ(ಎನ್ ಸಿ ಆರ್)ದಾದ್ಯಂತ ಇದೇ ವಿಧಾನ ಅನುಸರಿಸಬೇಕು ಎಂದು ಸೂಚಿಸಿದರು.

ಅಹಮದಾಬಾದ್ ನಗರದಲ್ಲಿ ರೋಗಿಯ ಮನೆಯ ಬಳಿಗೆ ತೆರಳಿ ಪರೀಕ್ಷೆ ನಡೆಸಿ, ಚಿಕಿತ್ಸೆ ಕಲ್ಪಿಸುವ ‘ಧನ್ವಂತರಿ ರಥ್’ ಕುರಿತು ಮೋದಿ ವಿಶೇಷವಾಗಿ ಪ್ರಸ್ತಾಪಿಸಿದರು. ದೇಶದ ಇತರ ಪ್ರದೇಶಗಳಲ್ಲೂ ಇದನ್ನು ಜಾರಿಗೊಳಿಸಬೇಕು ಎಂದರು. 

ಅತಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಆಗಾಗ ಸಮೀಕ್ಷೆ ನಡೆಸಬೇಕು ಎಂದು ಮೋದಿ ಆದೇಶಿಸಿದರು. 

SCROLL FOR NEXT