ದೇಶ

ರಸಗೊಬ್ಬರ ಹಗರಣ: ಅಶೋಕ್ ಗೆಹ್ಲೊಟ್ ಸೋದರನ ಕಂಪೆನಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ, ದೇಶಾದ್ಯಂತ ಶೋಧ

Sumana Upadhyaya

ನವದೆಹಲಿ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರ ಸೋದರನಿಗೆ ಸೇರಿದ ಆಸ್ತಿ ಮೇಲೆ ಬುಧವಾರ ದಾಳಿ ನಡೆಸಿದೆ. ದೇಶದ ಹಲವು ಭಾಗಗಳಲ್ಲಿ ಇಂದು ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಮುಂದುವರಿಸಿದೆ.

ಇದರ ಜೊತೆಗೆ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳ, ಗುಜರಾತ್, ದೆಹಲಿಗಳಲ್ಲಿ ಕೂಡ ಈ ಹಗರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದೆ.

ಸಚಿನ್ ಪೈಲಟ್ ಮತ್ತು ಅವರ ನಿಷ್ಠಾವಂತ 18 ಮಂದಿ ಶಾಸಕರು ಬಂಡಾಯವೆದ್ದು ಸರ್ಕಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಜಾರಿ ನಿರ್ದೇಶನಾಲಯದ ಈ ದಾಳಿ ಅಶೋಕ್ ಗೆಹ್ಲೊಟ್ ಅವರಿಗೆ ಮತ್ತಷ್ಟು ಬಿಸಿ ಮುಟ್ಟಿಸಿದೆ.

ಅಶೋಕ್ ಗೆಹ್ಲೊಟ್ ಅವರ ಸೋದರ ಅಗ್ರಸೇನ್ ಗೆಹ್ಲೊಟ್ ಅವರು ನಡೆಸುತ್ತಿರುವ ರಸಗೊಬ್ಬರ ಕಂಪೆನಿ ಎಂಒಪಿ ರಸಗೊಬ್ಬರಗಳನ್ನು ಕಂಪೆನಿಗಳಿಗೆ ಮಾರಾಟ ಮಾಡಿ ರಫ್ತಿಗೆ ನಿಷೇಧವಿದ್ದರೂ ಕೂಡ ಅದನ್ನು ರಫ್ತು ಮಾಡಿ ಭಾರೀ ಪ್ರಮಾಣದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಎಂಒಪಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಇಂಡಿಯನ್ ಪೊಟೇಶ್ ಲಿಮಿಟೆಡ್ ಗೆ ಮಾತ್ರ ಅಧಿಕಾರವಿದ್ದು, ಅದು ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರಗಳನ್ನು ನೀಡುತ್ತದೆ.

2007ರಿಂದ 2009ರ ಅವಧಿಯಲ್ಲಿ ಅಗ್ರಸೇನ ಗೆಹ್ಲೊಟ್ ಅವರ ಕಂಪೆನಿಯಾದ ಅನುಪಮ್ ಕ್ರಿಶಿ, ಎಂಒಪಿಯನ್ನು ಸಬ್ಸಿಡಿ ದರಕ್ಕೆ ಕೊಂಡುಕೊಂಡು ಅದನ್ನು ರೈತರಿಗೆ ವಿತರಿಸುವ ಬದಲು ಬೇರೆಯವರಿಗೆ ಮಾರಾಟ ಮಾಡಿ ನಂತರ ಮಲೇಷಿಯಾ, ಸಿಂಗಾಪುರಕ್ಕೆ ಅಕ್ರಮವಾಗಿ ರಫ್ತು ಮಾಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

2012-13ರಲ್ಲಿ ಕಂದಾಯ ಇಲಾಖೆಯ ಗುಪ್ತಚರ ಮೂಲಕ ಈ ಹಗರಣ ಬೆಳಕಿಗೆ ಬಂದಿತ್ತು. ಆಗ ತೆರಿಗೆ ಇಲಾಖೆಗೆ ಹೇಳಿಕೆ ನೀಡಿದ್ದ ಅಗ್ರಸೇನ ಗೆಹ್ಲೊಟ್, ಕೆಲವು ಮಧ್ಯವರ್ತಿಗಳು ಎಂಒಪಿಯನ್ನು ತಮ್ಮಿಂದ ಖರೀದಿಸಿ ರೈತರಿಗೆ ವಿತರಿಸುವ ಬದಲು ವಿದೇಶಗಳಿಗೆ ರಫ್ತು ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು.

ಸುಂಕ ಇಲಾಖೆ ಈಗಾಗಲೇ ಗೆಹ್ಲೊಟ್ ಕಂಪೆನಿ ಮೇಲೆ 7 ಕೋಟಿ ರೂಪಾಯಿ ದಂಡ ಹೇರಿದೆ.

SCROLL FOR NEXT