ದೇಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆ: ಅಡ್ವಾಣಿಯವರನ್ನು ಭೇಟಿ ಮಾಡಿದ ಅಮಿತ್ ಶಾ

Vishwanath S

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಲಿರುವ ಬಿಜೆಪಿ  ಹಿರಿಯ ಮುಖಂಡ ಎಲ್‍ ಕೆ ಅಡ್ವಾಣಿ ಅವರನ್ನುಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮಾಜಿ  ಅಧ್ಯಕ್ಷ ಅಮಿತ್ ಶಾ ಬುಧವಾರ ಭೇಟಿ ಮಾಡಿದರು.

92 ವರ್ಷದ ಅಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದ ವೇಳೆ ಅಮಿತ್ ಶಾ ಅವರೊಂದಿಗೆ ಹಲವು ಸರ್ಕಾರಿ ವಕೀಲರಿದ್ದರು ಎಂದು ಮೂಲಗಳು ತಿಳಿಸಿವೆ. 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಜುಲೈ 24 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ  ಕೇಂದ್ರೀಯ ತನಿಖಾ ಬ್ಯೂರೋ(ಸಿಬಿಐ)ನ ವಿಶೇಷ ನ್ಯಾಯಾಲಯ ಅಡ್ವಾಣಿಯವರಿಗೆ ಸಮನ್ಸ್ ನೀಡಿದೆ.

ಅಯೋಧ್ಯೆಯ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ಕರಸೇವಕರು ಉರುಳಿಸಿದ್ದರು. ಅಡ್ವಾಣಿ ಅವರಲ್ಲದೆ ಡಾ. ಮುರಳಿ ಮನೋಹರ್ ಜೋಶಿ, ಎಂ ಎಸ್ ಉಮಾ ಭಾರತಿ, ಮತ್ತು ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. 

SCROLL FOR NEXT