ದೇಶ

ತೆಲಂಗಾಣ: ಚೀನಾ ಸಂಘರ್ಷದಲ್ಲಿ ಮೃತಪಟ್ಟ ಕರ್ನಲ್ ಪತ್ನಿಗೆ ಡೆಪ್ಯುಟಿ ಕಲೆಕ್ಟರ್ ಹುದ್ದೆ!

Srinivas Rao BV

ಹೈದರಾಬಾದ್: ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಬಿ ಸಂತೋಷ್ ಬಾಬು ಅವರ ಪತ್ನಿ ಸಂತೋಷಿ ಅವರನ್ನು ತೆಲಂಗಾಣ ಸರ್ಕಾರ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ.

ಸ್ವತಃ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಗತಿ ಭವನದಲ್ಲಿ ಸಂತೋಷಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿ, ಅವರೊಟ್ಟಿಗೇ ಮಧ್ಯಾಹ್ನದ ಭೋಜನವನ್ನೂ ಸೇವಿಸಿದ್ದಾರೆ.

ನೇಮಕಾತಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿರುವ ಚಂದ್ರಶೇಖರ್ ರಾವ್, ತೆಲಂಗಾಣ ಸರ್ಕಾರ ಎಂದಿಗೂ ಸಂತೋಷ್ ಬಾಬು ಕುಟುಂಬವನ್ನು ಬೆಂಬಲಿಸಲಿ, ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಕಳೆದ ತಿಂಗಳು ಸಂತೋಷ್ ಬಾಬು ಅವರ ನಿವಾಸಕ್ಕೆ ತೆರಳಿದ್ದ ಸಿಎಂ ಕೆಸಿಆರ್, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಹುತಾತ್ಮ ಯೋಧರ ಪೋಷಕರಿಗೆ 1 ಕೋಟಿ ರೂಪಾಯಿ ಹಾಗೂ ಪತ್ನಿಗೆ 4 ಕೋಟಿ ರೂಪಾಯಿ ಪರಿಹಾರ ನೀಡಿದ್ದರು. ಅಷ್ಟೇ ಅಲ್ಲದೇ ಯೋಧನ ಪತ್ನಿಗೆ ಸರ್ಕಾರಿ ನೌಕರಿಯ ನೇಮಕಾತಿ ಭರವಸೆ ಹಾಗೂ ಹೈದರಾಬಾದ್ ನ ಬಂಜಾರ ಹಿಲ್ಸ್ ನ ಪ್ರದೇಶದಲ್ಲಿ 711 ಸ್ಕ್ವೇರ್ ಯಾರ್ಡ್ಸ್ ನ ನಿವೇಶನದ ದಾಖಲೆಗಳನ್ನು ಹಸ್ತಾಂತರಿಸಿದ್ದರು. ಜೂ.15 ರಂದು ಗಲ್ವಾನ್ ವ್ಯಾಲಿಯಲ್ಲಿ ಭಾರತ-ಚೀನಾ ಘರ್ಷಣೆಯಲ್ಲಿ 37 ವರ್ಷದ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದರು.

SCROLL FOR NEXT