ದೇಶ

ಕೇರಳ: ವಿಮಾನ ನಿಲ್ದಾಣದಲ್ಲಿ ಆರೋಗ್ಯ ಮಾಹಿತಿ ಮರೆಮಾಚಿದ ಐವರ ಕುಟುಂಬ ಈಗ ಕೊರೋನಾ ವೈರಸ್ ಪೀಡಿತ!

Lingaraj Badiger

ಕೊಚ್ಚಿ: ಇಟಲಿಗೆ ತೆರಳಿದ್ದ ಕೇರಳ ಕುಟುಂಬವೊಂದು ವಾಪಸ್ ಬಂದಾಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತಮ್ಮ ಆರೋಗ್ಯ ಮಾಹಿತಿ ನೀಡದೆ ವೈದ್ಯಕೀಯ ತಪಾಸಣೆಯಿಂದ ತಪ್ಪಿಸಿಕೊಂಡಿದ್ದ ಐವರಲ್ಲಿ ಈಗ ಕೊರೋನಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ತಲ್ಲಣಗೊಂಡಿದೆ ಮತ್ತು ಕಷ್ಟಪಟ್ಟು  ಸಂಪಾದಿಸದ ದೇಶದ ಅತ್ಯಂತ ಸುರಕ್ಷಿತ ಸ್ಥಳ ಎಂಬ ಖ್ಯಾತಿಯನ್ನು ಹಾಳು ಮಾಡಿದೆ.

ಪಟ್ಟಣಂತಿಟ್ಟ ಮೂಲದ ಈ ಐವರು ಸೋಂಕಿತರು ಕೊರೋನಾ ಪೀಡಿತ ಇಟಲಿಯ ವೆನಿಸ್'ಗೆ ತೆರಳಿದ್ದರು. ಐವರಲ್ಲಿ ದಂಪತಿ, ಅವರ ಪುತ್ರ ಹಾಗೂ ಇಬ್ಬರು ಸಂಬಂಧಿಕರಿದ್ದರು ಒಂದು ವಾರದ ಹಿಂದೆ ವಾಪಸು ಬಂದಾಗ ವಿಮಾನ ನಿಲ್ದಾಣದಲ್ಲಿ ಅದ್ಧೇಗೋ ತಪಾಸಣೆಯನ್ನು ತಪ್ಪಿಸಿಕೊಂಡು ಮನೆಗ ವಾಪಸ್ಸಾಗಿದ್ದರು. ಈಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಕೇರಳ ಆರೋಗ್ಯ ಇಲಾಖೆ ಈ ಐವರನ್ನು ವಿಮಾನ ನಿಲ್ದಾಣದಲ್ಲಿಯೇ ತಪಾಸಣೆಗೆ ಒಳಪಡಿಸದೇ ದೊಡ್ಡ ತಪ್ಪು ಮಾಡಿದ್ದು, ಈಗ ಆ ಕುಟುಂಬವೇ ಆರೋಗ್ಯ ಮಾಹಿತಿ ನೀಡಿಲ್ಲ ಮತ್ತು ಅವರು ಇಟಲಿಯಿಂದ ಬಂದಿರುವುದನ್ನು ಹೇಳಿಲ್ಲ ಎಂದು ಆರೋಪಿಸುತ್ತಿದೆ.

ಕೇರಳದಲ್ಲಿ ಮಾರ್ಚ್ 3ರ ವರೆಗೆ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿರಲಿಲ್ಲ. ಹೀಗಾಗಿ ಅವರು ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾರೆ. 'ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು' ಎಂಬಂತೆ ಕೇರಳ ಸರ್ಕಾರ ಈಗ ಎಚ್ಚೆತ್ತುಕೊಂಡಿದ್ದು, ಈ ಐವರು ಸೋಂಕಿತರು ಹಲವು ಊರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಇಟಲಿಯಿಂದ ಆಗಮಿಸಿದ ಈ ಕುಟುಂಬ ತಮ್ಮ ಆರೋಗ್ಯ ಮಾಹಿತಿ ನೀಡದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ತಮಗೆ ಯಾವುದೇ ಜ್ವರ, ಕೆಮ್ಮು, ಸೀನು ಇಲ್ಲ ಎಂದು ಹೇಳಿದ್ದಾರೆ ಎಂದು ಎರ್ನಾಕುಲಂ ಡಿಎಂಒ ಎನ್ ಕೆ ಕುಟ್ಟಪ್ಪ ಅವರು ಹೇಳಿದ್ದಾರೆ.

ಕೇರಳ ಆರೋಗ್ಯ ಸಚಿವಾಲಯ ಈಗ ಎಚ್ಚರಿಕೆ ಸಂದೇಶ ನೀಡಿದ್ದು, ವಿದೇಶಗಳಿಗೆ ಹೋಗಿ ಬರುವ ಹಾಗೂ ಸೋಂಕಿನ ಲಕ್ಷಣ ಇರುವ ಪ್ರಯಾಣಿಕರು ತಮ್ಮ ಆರೋಗ್ಯದ ಮಾಹಿತಿಯನ್ನು ತಿಳಿಸಿ, ತಪಾಸಣೆಗೆ ಒಳಪಡಬೇಕು. ಒಂದು ಮಾಹಿತಿ ಮುಚ್ಚಿಟ್ಟರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

SCROLL FOR NEXT