ದೇಶ

ಮಾ.22 ರಂದು ದೇಶಾದ್ಯಂತ 'ಜನತಾ ಕರ್ಫ್ಯೂ ಜಾರಿ- ಪ್ರಧಾನಿ ಮೋದಿ

Nagaraja AB

ನವದೆಹಲಿ: ಜಗತ್ತಿನಾದ್ಯಂತ ಮನುಕುಲವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮಹಾಮಾರಿ ಕೊರೋನಾವೈರಸ್ ನಿಯಂತ್ರಣ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಮಾರ್ಚ್ 22 ರಂದು ಜನತಾ ಕರ್ಫ್ಯೂವನ್ನು  ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ. 

ಕೊರೋನಾವೈರಸ್ ಸೋಂಕಿನ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ದೇಶವಾಸಿಯನ್ನುದ್ದೇಶಿಸಿ ಮಾತನಾಡಿದ ಅವರು,ವೈರಸ್ ನಿಂದ ಕಾಪಾಡಿಕೊಳ್ಳಲು ಜನತಾ ಕರ್ಫ್ಯೂ ಅವಶ್ಯಕತೆಯಿದೆ. ಅದನ್ನು ಎಲ್ಲರೂ ಪಾಲಿಸಬೇಕು. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಇದು ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಜನತಾ ಕರ್ಫ್ಯೂ ಸಂದರ್ಭ ಮನೆಯಿಂದ ಯಾರು ಹೊರಗೆ ಬರಬಾರದು. ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ. ಆ ದಿನ  ಸಂಜೆ 5 ಗಂಟೆಗೆ ಮನೆಗಳ ಬಾಗಿಲು, ಬಾಲ್ಕನಿ , ಕಿಟಕಿ ಬಳಿ  ಚಪ್ಪಾಳೆ ಹೊಡೆಯುವ ಮೂಲಕ ಬೇರೆಯವರಿಗೆ ಧನ್ಯವಾದ ಆರ್ಪಿಸೋಣ ಎಂದು ತಿಳಿಸಿದರು.

ಕೋವಿಡ್ 19 ಬಗ್ಗೆ ಆತಂಕಪಡಬೇಡಿ: ಸೋಂಕಿತರ ಸಂಖ್ಯೆಗಳಿಂದ ವಿಮುಖರಾಗಬೇಡಿ. ನಾವು ನಿಜವಾಗಿಯೂ ಜಾಗರೂಕರಾಗಿರದಿದ್ದರೆ ಅದು ಹೆಚ್ಚಾಗುತ್ತದೆ. ಮುಂದಿನ ವಾರಗಳು ಶಿಸ್ತು, ಸಂಯಮ ಹಾಗೂ ಸಹಕಾರದಿಂದ ಕೂಡಿರಬೇಕಾಗಿರುತ್ತದೆ.ಸಮಾಜದಿಂದ ಅಂತರ ಕಾಯ್ದುಕೊಳ್ಳುವುದನ್ನು ಲಘುವಾಗಿ ಪರಿಗಣಿಸಬೇಡಿ, ದಯವಿಟ್ಟು ಹೊರಹೋಗಬೇಡಿ. ಹೊರಗೆ ಹೋಗುವುದರಿಂದ ನಿಮ್ಮಗೆ ಮಾತ್ರವಲ್ಲ, ವ್ಯವಸ್ಥೆಯಲ್ಲಿರುವ ಇತರ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಆದ್ದರಿಂದ ಹೊರಗೆ ಹೋಗುವುದು ಅಗತ್ಯವಾಗಿದೆ ಎಂದರು.

ಅಗತ್ಯವಿರುವ ಎಲ್ಲವನ್ನು ಒದಗಿಸುತ್ತೇವೆ. ಕೆಲಸಕ್ಕೆ ರಜೆ ಹಾಕುವವರ ಸಂಬಳ ಕಟ್ ಮಾಡಲ್ಲ, ಹಣಕಾಸಿನ ಬಗ್ಗೆ ಭಯಪಡಬೇಡಿ, ಮೊದಲು ಆರೋಗ್ಯದ ಕಡೆಗೆ ಗಮನ ನೀಡಿ. ಆರ್ಥಿಕ ಪರಿಸ್ಥಿತಿಯನ್ನು ಮರಳಿ ತನ್ನ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿದೆ. ಕೊರೋನಾ ವಿರುದ್ಧದ ಹೋರಾಟ ಇದೀಗ ನಮ್ಮ ಮೊದಲ ಆದ್ಯತೆಯಾಗಿದೆ. ಮಾನವೀಯತೆಯನ್ನು ಗೆಲ್ಲಬೇಕಾಗಿದೆ. ಇದರ ಮುಂದೆ ಯಾವುದು ಇಲ್ಲ ಎಂದು ನರೇಂದ್ರ ಮೋದಿ ಹೇಳಿದರು. 

ಕಳೆದ ಎರಡು ತಿಂಗಳಿನಿಂದ ಕೊರೋನಾವೈರಸ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಮನುಕುಲ ಸಂಕಷ್ಟಕ್ಕೆ ಸಿಲುಕಿದೆ. ಈ ಸೋಂಕಿಗೆ ಈವರೆಗೂ ಯಾವುದೇ ಲಸಿಕೆ ಕಂಡುಹಿಡಿಯುವಲ್ಲಿ ವಿಜ್ಞಾನ ವಲಯ ವಿಫಲವಾಗಿದೆ. ಪ್ರತಿಯೊಬ್ಬ ಭಾರತೀಯರು ಮುಂಜಾಗ್ರತಾ ವಹಿಸಬೇಕಾದದ್ದು ಪ್ರಮುಖವಾಗಿದೆ.ಕೊರೋನಾವೈರಸ್ ತಡೆಗಾಗಿ ಭಾರತ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದೆ. ಹಣಕಾಸು ಸಚಿವರ ನೇತೃತ್ವದಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ರಚಿಸಿದೆ ಎಂದು ತಿಳಿಸಿದರು.

SCROLL FOR NEXT