ದೇಶ

ಕೊರೋನಾ ವೈರಸ್: 21 ದಿನಗಳ ಲಾಕ್ ಡೌನ್ ಹಿನ್ನಲೆ, ಹೊಸ ಪಡಿತರ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಈ ಅವಧಿಯಲ್ಲಿ ಜನರ ಸಂಕಷ್ಟ ನಿವಾರಣೆಗೆ ಕೇಂದ್ರ ಸರ್ಕಾರ ಹೊಸ ಪಡಿತರ ಯೋಜನೆ ಘೋಷಣೆ ಮಾಡಿದೆ.

ಈ ಕುರಿತಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಇಡೀ ದೇಶ ಒಪ್ಪಿದೆ. ಮಾರಕ ಕೊರೋನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಅತಿ  ಮುಖ್ಯವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ನಿತ್ಯ ಅವಸರ ಸಾಮಗ್ರಿಗಳು ಲಭ್ಯವಿರುತ್ತದೆ. ಸಾಮಾಗ್ರಿಗಳನ್ನು ಕೊಳ್ಳುವಾಗ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಾರೆ. ಇನ್ನು ಕೋವಿಡ್ 19 ಸಂಬಂಧಿತ ಜಿಲ್ಲಾವಾರು ಹೆಲ್ಪ್ ಲೈನ್ ತೆರೆಯಲೂ ಸಹ ನಿರ್ಧರಿಸಲಾಗಿದೆ.

ಇದೇ ವೇಳೆ ಲಾಕ್ ಡೌನ್ ಹಿನ್ನಲೆಯಲ್ಲಿ ವಿಶೇಷ ಪಡಿತರ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಯೋಜನೆಯ ಅನ್ವಯ 80 ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ 2 ರೂ. ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ 3 ರೂ. ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರಕಾರ  ತೀರ್ಮಾನಿಸಿದೆ. ಅಂತೆಯೇ ಕಟ್ಟಡ ಕಾರ್ಮಿಕರಿಗೆ ಉಚಿತ ಊಟವನ್ನು ಪೂರೈಸುವ ನಿರ್ಧಾರಕ್ಕೂ ಕೇಂದ್ರ ಸರ್ಕಾರ ಬಂದಿದೆ. ಇದಲ್ಲದೆ ಮೂರು ತಿಂಗಳ ಪಡಿತರವನ್ನು ಮುಂಗಡವಾಗಿಯೇ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ವೇತನ ನೀಡಲು ಸೂಚಿಸಲಾಗಿದೆ.  ಅಲ್ಲದೆ ಕಾಳಸಂತೆಯಲ್ಲಿ ದಿನಸಿ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಜನರಿಗೆ ಪಡಿತರವನ್ನು ಸಿಗುವಂತೆ ಮಾಡುವ ಮತ್ತು ಇನ್ನಿತರ ಸವಲತ್ತುಗಳನ್ನು ಜನರಿಗೆ ತಲುಪಿಸುವುದಕ್ಕೆ ಸಂಬಂಧಿಸಿ ಮಾರ್ಗದರ್ಶಿ  ಸೂತ್ರಗಳನ್ನು ದಿನದ ಅಂತ್ಯದೊಳಗೆ ಸರಕಾರ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ಇನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 1,340 ಕೋಟಿ ರೂಪಾಯಿಗಳ ನಿಧಿ ಬಿಡುಗಡೆ ಮಾಡಿದ್ದು, ಗ್ರಾಮೀಣ ಭಾಗದ ಜನರು ಇದರ ಉಪಯೋಗ ಮಾಡಿಕೊಳ್ಳಬಹುದು.

ವೈದ್ಯರು, ಪತ್ರಕರ್ತರು ಮತ್ತು ಇ ಕಾಮರ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ತಡೆ ಬೇಡ
ಇನ್ನು ಇದೇ ವೇಳೆ ವೈದ್ಯರು, ಪತ್ರಕರ್ತರು ಮತ್ತು ಇ ಕಾಮರ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ತಡೆ ಬೇಡ ಎಂದು ಹೇಳಿರುವ ಸಚಿವ ಜಾವಡೇಕರ್ ಅವರು, ಕೊರೋನಾ ವೈರಸ್ ನಿಯಂತ್ರಣದ ಈ ಹೋರಾಟದಲ್ಲಿ ಇವರ ಸೇವೆ ಶ್ಲಾಘನೀಯ ಎಂದು ಹೇಳಿದರು.

SCROLL FOR NEXT