ದೇಶ

ಕೊರೋನಾ ವೈರಸ್: ನಿಜಾಮುದ್ದೀನ್ ಮಾರ್ಕಾಜ್ ಮೌಲಾನ ಮತ್ತಿತರರ ವಿರುದ್ಧ ಪ್ರಕರಣ ದಾಖಲು

Srinivasamurthy VN

ನವದೆಹಲಿ: ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ, ಸೂಚನೆಗಳ ವಿರುದ್ಧವಾಗಿ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ದೆಹಲಿ ಪೊಲೀಸರು ಮಂಗಳವಾರ ಮೌಲಾನ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ, ರಾಜಕೀಯ, ಧಾರ್ಮಿಕ ಸಭೆ ಮತ್ತು ಇತರ ಸುರಕ್ಷತಾ ಕ್ರಮಗಳ ನಿರ್ಬಂಧವನ್ನು ಪಾಲಿಸದ ಮೌಲಾನ ಮತ್ತು ತಬ್ಲಿಘಿ ಜಮಾತ್‌ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರ ಅಪರಾಧ ದಳ ನಡೆಸಲಿದೆ. ಈಗಾಗಲೇ ದೆಹಲಿ  ಪೊಲೀಸರು ಪಶ್ಚಿಮ ನಿಜಾಮುದ್ದೀನ್ ಪ್ರದೇಶದಲ್ಲಿ ತನಿಖೆ ಆರಂಭಿಸಿದ್ದಾರೆ. ಸಾಂಕ್ರಾಮಿಕ ರೋಗ ಕಾಯ್ದೆ 1897 ರ ಸೆಕ್ಷನ್ 3 ರ ಅಡಿಯಲ್ಲಿ ಮೌಲಾನ ಸಾದ್ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಮೌಲಾನಾ ಸಾದ್ ವಿರುದ್ಧ  ಸಾಂಕ್ರಾಮಿಕ ರೋಗ ಕಾಯ್ದೆ 1987ನ ಸೆಕ್ಷನ್  269, 270, 271 ಮತ್ತು ಐಪಿಸಿ ಸೆಕ್ಷನ್ 120-ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಸೀದಿಯಲ್ಲಿ ನಡೆದ ತಬ್ಲಿಗಿ ಜಮಾಅತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಎಲ್ಲರನ್ನೂ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈ ಹೊತ್ತಲ್ಲಿ ನಾವು ತಪ್ಪು ಹುಡುಕುವ  ಬದಲು ರೋಗ ಹರಡಿರುವ ಜಾಗಗಳ ಬಗ್ಗೆ ಪತ್ತೆ ಹಚ್ಚಿ ಅದು ಮತ್ತಷ್ಟು ಹರಡದಂತೆ ನೋಡಿಕೊಳ್ಳ ಬೇಕು ಎಂದು ಹೇಳಿದೆ. 

ಇನ್ನು ಈ ಧಾರ್ಮಿಕ ಸಭೆಯಲ್ಲಿ ಭಾಗಿಯಾದ 24 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಭೆಯಲ್ಲಿ ಭಾಗವಹಿಸಿದ 700 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಪೈಕಿ 335 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಆರೋಗ್ಯ  ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ನಿನ್ನೆಯಷ್ಟೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಗಮಿಸಿದ್ದ 6 ಮಂದಿ ಕೊರೋನಾ ವೈರಸ್ ಲಕ್ಷಣದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. 

SCROLL FOR NEXT