ದೇಶ

ಜಯಲಲಿತಾ ಸ್ಮಾರಕ: ನಿವಾಸವನ್ನು ವಶಕ್ಕೆ ಪಡೆದ ತಮಿಳುನಾಡು ಸರ್ಕಾರ

Nagaraja AB

ಚೆನ್ನೈ:  ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ನಿವಾಸ ವೇದ ನಿಲಯಂನ್ನು ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ತಮಿಳು ನಾಡು ಸರ್ಕಾರ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ. ವೇದ ನಿಲಯಂ ಹಾಗೂ ಅದರಲ್ಲಿನ ಅಪರೂಪದ ವಸ್ತುಗಳನ್ನು ತಾತ್ಕಾಲಿಕವಾಗಿ ಸರ್ಕಾರದ ವಶಕ್ಕೆ ಪಡೆಯುವ ಸುಗ್ರೀವಾಜ್ಞೆಗೆ  ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್  ಅಂಕಿತ ಹಾಕಿದ್ದಾರೆ. 

ವೇದ ನಿಲಯವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಮಾಡಿಕೊಳ್ಳಬೇಕಾದ ದೀರ್ಘಾವಧಿಯ ವ್ಯವಸ್ಥೆಗಾಗಿ ಪುರಚ್ಚಿ ತಲೈವಿ ಡಾ.ಜೆ.ಜಯಲಲಿತಾ ಸ್ಮಾರಕ ಫೌಂಡೇಷನ್  ಕೂಡಾ ರಚಿಸಲಾಗುತ್ತಿದೆ.ಜಯಲಲಿತಾ ನಿವಾಸ ಸ್ವಾಧೀನ ಸಂಬಂಧ ಸಾರ್ವಜನಿಕ ಸೂಚನೆ ಹೊರಡಿಸಿದ ಎರಡು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. 

ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೇದ ನಿಲಯಂ ಸೇರಿದಂತೆ ಅದರಲ್ಲಿನ ಪಿಠೋಪಕರಣಗಳು, ಪುಸ್ತಕಗಳು, ಅಭರಣಗಳು ಮತ್ತಿತರ ವಸ್ತುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಪುರಚ್ಚಿ ತಲೈವಿ ಡಾ. ಜಯಲಿಲಿತಾ ಸ್ಮಾರಕ ಫೌಂಡೇಷನ್ ಅಧ್ಯಕ್ಷರಾಗಲಿದ್ದು, ಉಪ ಮುಖ್ಯಮಂತ್ರಿ ಪನ್ನಿರುಸೆಲ್ವಂ, ಸಚಿವ ಕಡಂಬೂರ್ ರಾಜು, ಸರ್ಕಾರದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಸಾರ್ವಜನಿಕ ಮತ್ತು ಸಾರ್ವಜನಿಕ ಸಂಬಂಧ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. 

ಸ್ಮಾರಕದಲ್ಲಿನ ಎಲ್ಲಾ ಅಪರೂಪದ ವಸ್ತುಗಳ ಸುರಕ್ಷತೆ ಹಾಗೂ ನಿರ್ವಹಣೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಈ ಫೌಂಡೇಶನ್ ಕೈಗೊಳ್ಳಲಿದೆ. ಜಯಲಲಿತಾ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಿ ಜಯಲಿಲಿತಾ ಅವರ ಸಾಧನೆ ಹಾಗೂತಮಿಳು ನಾಡು ಜನರಿಗಾಗಿ ಮಾಡಿರುವ ತ್ಯಾಗವನ್ನು ಪರಿಚಯಿಸಲಾಗುವುದು ಎಂದು ಪಳನಿಸ್ವಾಮಿ 2017, ಆಗಸ್ಟ್ 17 ರಂದು ಘೋಷಿಸಿದ್ದರು. 

ಚೆನ್ನೈನ ಪೋಯೆಸ್ ಗಾರ್ಡನ್ ನಲ್ಲಿರುವ  ವೇದ ನಿಲಯವನ್ನು ಸ್ವಾಧೀನಪಡಿಸಿಕೊಳ್ಳಲು 2017 ರ ಅಕ್ಟೋಬರ್ 5 ರಂದು ತಮಿಳು ಅಭಿವೃದ್ಧಿ ಮತ್ತು ಮಾಹಿತಿ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.2019 ಜೂನ್ 28 ರಂದು ಭೂಮಿ ಮತ್ತು ಕಟ್ಟಡ ಸ್ವಾಧೀನ ಕ್ರಮದ ಬಗೆಗಿನ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ  ಮೇ 6ರಂದು ಅಂತಿಮ ಘೋಷಣೆಯನ್ನು ಪ್ರಕಟಿಸಲಾಗಿತ್ತು. 

SCROLL FOR NEXT