ದೇಶ

ಅಂಫಾನ್ ಚಂಡಮಾರುತ: ಮೇ 26 ರವರೆಗೂ ಶ್ರಮಿಕ್ ರೈಲು ಕಳಿಸಬೇಡಿ; ರೈಲ್ವೇಗೆ ಪಶ್ಚಿಮ ಬಂಗಾಳ ಸರ್ಕಾರ ಮನವಿ

Srinivasamurthy VN

ಕೋಲ್ಕತಾ: ಅಂಫಾನ್ ಚಂಡಮಾರುತದಿಂದಾಗಿ ಈಗಾಗಲೇ ರಾಜ್ಯ ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದು, ಇಂತಹ ಸಂದರ್ಭದಲ್ಲಿ ಶ್ರಮಿಕ್ ವಿಶೇಷ ರೈಲು ರವಾನೆ ಮಾಡಬೇಡಿ ಎಂದು ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ರೈಲ್ವೇ ಇಲಾಖೆಗೆ ಮನವಿ ಮಾಡಿದೆ.

ಈ ಬಗ್ಗೆ ಸ್ವತಃ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ರೈಲ್ವೇ ಇಲಾಖೆಗೆ ಮನವಿ ಮಾಡಿದ್ದು ಮೇ 26ರವರೆಗೂ ಬಂಗಾಳಕ್ಕೆ ಯಾವುದೇ ಶ್ರಮಿಕ್ ವಿಶೇಷ ರೈಲುಗಳನ್ನು ಕಳುಹಿಸಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಕಾರ್ಯದರ್ಶಿ ರಾಜೀವ್  ಸಿನ್ಹಾ ಅವರು ರೈಲ್ವೇ ಬೋರ್ಡ್ ಚೇರ್ಮನ್ ವಿಕೆ ಯಾದವ್ ಅವರಿಗೆ ಮೇ22ರಂದು ಪತ್ರ ಬರೆದಿದ್ದು. ಅಂಫಾನ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಸಾವುನೋವು ಸಂಭವಿಸಿದೆ. ಅಪಾರ ಪ್ರಮಾಣದ ನಷ್ಟವಾಗಿದೆ. ಬಂಗಾಳದ ಎಲ್ಲ ಜಿಲ್ಲಾಡಳಿತಗಳೂ ರಕ್ಷಣಾ  ಕಾರ್ಯಾಚರಣೆಗಳಲ್ಲಿ ನಿರತವಾಗಿದ್ದು, ಮುಂದಿನ ಕೆಲ ದಿನಗಳ ಕಾಲ ನಾವು ಶ್ರಮಿಕ್ ವಿಶೇಷ ರೈಲುಗಳನ್ನು ಸ್ವಾಗತಿಸಲು ಸಾಧ್ಯವಿಲ್ಲ. ಅಂತೆಯೇ ಹೊರ ರಾಜ್ಯಗಳಿಂದ ಬರುವವರ ನಿರ್ವಹಣೆ ಕೂಡ ಅಸಾಧ್ಯ. ಹೀಗಾಗಿ ಮೇ 26ರವರೆಗೂ ಶ್ರಮಿಕ್ ರೈಲುಗಳನ್ನು ರಾಜ್ಯರಕ್ಕೆ ಕಳುಹಿಸಿ  ಕೊಡಬೇಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. 

ಇನ್ನು ಬಂಗಾಳ ಮತ್ತು ಒಡಿಶಾದಲ್ಲಿ ಆರ್ಭಟಿಸಿದ್ದ ಅಂಫಾನ್ ಚಂಡಮಾರುತಕ್ಕೆ ಬಂಗಾಳವೊಂದರಲ್ಲೇ ಕನಿಷ್ಟ 86 ಮಂದಿ ಸಾವನ್ನಪ್ಪಿದ್ದರು, ಅಂತೆಯೇ ಚಂಡಮಾರುತದ ರಭಸಕ್ಕೆ ಸುಮಾರು 1 ಲಕ್ಷ ಕೋಟಿಗೂ ಅಧಿಕ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿ ನಷ್ಟವಾಗಿತ್ತು. 

SCROLL FOR NEXT