ದೇಶ

ಉತ್ತರಪ್ರದೇಶ: ಶ್ರಮಿಕ್ ವಿಶೇಷ ರೈಲಿನಲ್ಲಿದ್ದ ವಲಸೆ ಕಾರ್ಮಿಕರ ಮೇಲೆ ಬಿಸ್ಕೆಟ್ ಪ್ಯಾಕೆಟ್'ಗಳನ್ನು ಎಸೆದ ರೈಲ್ವೆ ಅಧಿಕಾರಿ, ವಿಡಿಯೋ ವೈರಲ್

Manjula VN

ಲಖನೌ: ಶ್ರಮಿಕ್ ವಿಶೇಷ ರೈಲಿನಲ್ಲಿ ಸಂಚರಿಸುತ್ತಿದ್ದ ವಲಸೆ ಕಾರ್ಮಿಕರ ಮೇಲೆ ರೈಲ್ವೇ ಅಧಿಕಾರಿಯೊಬ್ಬರು ಬಿಸ್ಕೆಟ್ ಪ್ಯಾಕೆಟ್ ಗಳನ್ನು ಎಸೆದು, ಅಪಹಾಸ್ಯ ಮಾಡಿರುವ ಘಟನೆಯೊಂದು ಉತ್ತರಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ 3 ನಿಮಿಷಗಳಿದ್ದು, ವಲಸೆ ಕಾರ್ಮಿಕರ ಮೇಲೆ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಎಸೆಯುವ ಅಧಿಕಾರಿ ಅವರನ್ನು ನಿಂದಿಸುತ್ತಿರುವುದು ಹಾಗೂ ಅಪಹಾಸ್ಯ ಮಾಡುತ್ತಿರುವುದು ಕಂಡು ಬಂದಿದೆ, ವಿಡಿಯೋ ಕುರಿತು ಸಾಕಷ್ಟು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ. 

ರೈಲ್ವೇ ಟಿಕೆಟ್ ಪರಿಶೀಲನಾಧಿಕಾರಿ ಡಿ,ಕೆ.ದೀಕ್ಷಿತ್ ಎಂಬವವರ ನೇತೃತ್ವದಲ್ಲಿ ತಂಡವೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಬಿಸ್ಕೆಟ್ ಎಸೆದಿದ್ದಾರೆಂದು ತಿಳಿದುಬಂದಿದೆ. ಬಿಸ್ಕೆಟ್ ಎಸೆಯುತ್ತಿದ್ದ ದೀಕ್ಷಿತ್ ಅವರು ಕಾರ್ಮಿಕರನ್ನು ನಿಂದಿಸಿದ್ದೂ ಅಲ್ಲದೆ, ಅಪಹಾಸ್ಯ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. 

ಮೂಲಕ ಪ್ರಕಾರ ದೀಕ್ಷಿತ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕಾರ್ಮಿಕರಿಗೆ ಬಿಸ್ಕೆಟ್ ನೀಡಿದ್ದರೂ ಎಂದು ಹೇಳಲಾಗುತ್ತಿದೆ. 

ಬಿಸ್ಕೆಟ್ ವಿತರಿಸಿರುವ ವಿಡಿಯೋವನ್ನು ಸ್ಥಳೀಯ ರೈಲ್ವೇ ಅಧಿಕಾರಿಯೊಬ್ಬರು ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಆಗಿದೆ ಎಂದು ತಿಳಿದುಬಂದಿದೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ ಇದೀಗ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಿದೆ ಎಂದು ತಿಳಿದುಬಂದಿದೆ.

SCROLL FOR NEXT