ದೇಶ

ಕೋವಿಡ್ 19: ಮನುಷ್ಯರ ಮೇಲೆ ಸೋಂಕು ನಿವಾರಕ ಸಿಂಪಡಣೆಗೆ ನಿಷೇಧ ಹೇರಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ

Sumana Upadhyaya

ನವದೆಹಲಿ: ಕೋವಿಡ್-19 ನಿರ್ವಹಣೆಗೆ ಮನುಷ್ಯರ ಮೇಲೆ ಸೋಂಕು ನಿವಾರಕಗಳು ಮತ್ತು ನೇರಳಾತೀತ (ಅಲ್ಟ್ರಾವಯಲೆಟ್) ಕಿರಣಗಳನ್ನು ಬಳಸುವುದಕ್ಕೆ ನಿಷೇಧ ಹೇರಲು ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ತಿಂಗಳೊಳಗೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಹೇಳಿದೆ.

ಮಾನವರ ಮೇಲೆ ರಾಸಾಯನಿಕ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಅಥವಾ ಹೊಗೆ ಹಾಕುವುದು, ಕು ಸೋಂಕು ನಿವಾರಕಗಳ ಜಾಹೀರಾತು ಮಾಡುವುದು, ಉತ್ಪಾದನೆ ಮತ್ತು ಸ್ಥಾಪನೆ ಮಾಡುವುದಕ್ಕೆ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.

ಕೋವಿಡ್-19ಗೆ ಮನುಷ್ಯರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದರಿಂದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ದೇಹಕ್ಕೆ ತೊಂದರೆಯಿದ್ದು ಇದಕ್ಕೆ ನಿಷೇಧ ಹೇರಬಾರದೇಕೆ ಎಂದು ಕಳೆದ ಸೆಪ್ಟೆಂಬರ್ 7ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. 

ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಇದಕ್ಕೂ ಮುನ್ನ ಕೋರ್ಟ್ ಗೆ ಮಾಹಿತಿ ನೀಡಿ ಆರೋಗ್ಯ ಸಚಿವಾಲಯ ಯಾವುದೇ ಸಲಹೆ ಅಥವಾ ಮಾರ್ಗಸೂಚಿಯನ್ನು ನೇರಳಾತೀತ ಕಿರಣಗಳ ಸೋಂಕುನಿವಾರಕಗಳನ್ನು ಕೋವಿಡ್-19 ನಿರ್ವಹಣೆಗೆ ಮನುಷ್ಯರ ಮೇಲೆ ಪ್ರಯೋಗಿಸುವುದಕ್ಕೆ ಹೊರಡಿಸಿಲ್ಲ ಎಂದು ಮಾಹಿತಿ ನೀಡಿದ್ದರು.

ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳು ರಾಜ್ಯ ವಿಷಯವಾಗಿರುವುದರಿಂದ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ಜಾರಿಗೆ ತರುವ ಮತ್ತು ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಸೀಮಿತವಾಗಿದೆ ಎಂದರು.

SCROLL FOR NEXT