ದೇಶ

ಭಾರತದಲ್ಲಿ ವಿಶ್ವದ ಮೊದಲ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ: ಕೇಂದ್ರ ಸಚಿವ ಕಿಶನ್ ರೆಡ್ಡಿ

Vishwanath S

ಹೈದರಾಬಾದ್: ಭಾರತದಲ್ಲಿ ವಿಶ್ವದ ಮೊದಲ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಕೇಂದ್ರ ಸರ್ಕಾರ ಸ್ಥಾಪಿಸಲಿದೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಭಾನುವಾರ ತಿಳಿಸಿದ್ದಾರೆ.

ಇಲ್ಲಿನ ಅಂಬರ್ ಪೇಟ್ ನ ಡಿಸಿಪಿ ಪೂರ್ವ ವಲಯ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ  ಖಾಲಿ ಇರುವ ಶೇ 41 ರಷ್ಟು ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಹೇಳಿದ್ದಾರೆ. 

ಅರೆಸೇನಾ ಪಡೆಗಳಲ್ಲಿ ಉದ್ಯೋಗ ಪಡೆಯಲು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದ ಸಚಿವರು, ದೇಶದ ಐಪಿಸಿ ಮತ್ತು ಸಿಆರ್ ಪಿಸಿ ಸೆಕ್ಷನ್ ಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. 

ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ತೆಲಂಗಾಣ ಮತ್ತು ಆಂಧ್ರ ಪೊಲೀಸರನ್ನು ಶ್ಲಾಘಿಸಿದ ಸಚಿವರು, ಅಸ್ತಿತ್ವದಲ್ಲಿರುವ ತಂತ್ರಜ್ಞಾನದ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ತೆಲಂಗಾಣ ಮುಂಚೂಣಿಯಲ್ಲಿದೆ. ದೇಶಾದ್ಯಂತ ಮೆಟ್ರೋ ನಗರಗಳನ್ನು ಸುರಕ್ಷಿತ ನಗರಗಳನ್ನಾಗಿ ಮಾಡುವ ಭಾಗವಾಗಿ ಟಿಜೆಇ ಅಪರಾಧವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಅಪರಾಧಿಗಳನ್ನು ಬಂಧಿಸಲು ಮತ್ತು ಶಿಕ್ಷಿಸಲು ಸಿಸಿಟಿವಿ ಕ್ಯಾಮೆರಾಗಳು ತುಂಬಾ ಉಪಯುಕ್ತವಾಗಿವೆ ಎಂದ ಸಚಿವರು,  ಭಾರತದಲ್ಲಿ  ಹೈದರಾಬಾದ್ ಸೇರಿದಂತೆ ಸುರಕ್ಷಿತ ನಗರಗಳ ಯೋಜನೆಯಲ್ಲಿ 8 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ನೇರ ಆರ್ಥಿಕ ನೆರವು ನೀಡಿದೆ ಎಂದು ತಿಳಿಸಿದ್ದಾರೆ.

SCROLL FOR NEXT