ದೇಶ

'ಮಹಾ' ಸಿಎಂಗೆ ಗವರ್ನರ್ ಕೋಶ್ಯಾರಿ ಪತ್ರ; ಪ್ರಧಾನಿ ಮೋದಿಗೆ ಪತ್ರ ಬರೆದು ಶರದ್ ಪವಾರ್ ಆಕ್ರೋಶ!

Srinivasamurthy VN

ಮುಂಬೈ: ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರವೊಂದು ಇದೀಗ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಈ ಪತ್ರದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್ ಅನ್ಲಾಕ್ ಮಾರ್ಗಸೂಚಿ ಹೊರತಾಗಿಯೂ ಮಹಾರಾಷ್ಟ್ರ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ, 'ನೀವು ಹಿಂದೂತ್ವದ ಗಟ್ಟಿ  ಉಪಾಸಕರು ನೀವೇನಾದರೂ ಜಾತ್ಯಾತೀತತೆ ಕಡೆಗೆ ಹೊರಳಿಕೊಂಡಿದ್ದೀರ ಎಂದು ವಿಡಂಬನಾತ್ಮಕವಾಗಿ ಪ್ರಶ್ನಿಸಿದ್ದರು. ಇದಕ್ಕೆ ಅದೇ ಧಾಟಿಯಲ್ಲಿ ಉತ್ತರ ನೀಡಿದ್ದ ಸಿಎಂ ಉದ್ಧವ್ ಠಾಕ್ರೆ, 'ನನಗೆ ಯಾರೂ ಹಿಂದೂತ್ವದ ಪಾಠವನ್ನು ಹೇಳಿಕೊಡಬೇಕಿಲ್ಲ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಪ್ರತ್ಯುತ್ತರ  ನೀಡಿದ್ದಾರೆ.

ಇತ್ತ ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೂ ಕೂಡ ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು ರಾಜ್ಯಪಾಲರ ನಡೆ ಬಗ್ಗೆ ದೂರಿದ್ದಾರೆ. ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಸರ್ಕಾರದ  ನಿರ್ಧಾರಗಳಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ವಿನಿಮಯವಾಗುತ್ತವೆ. ಆದರೆ ಗೌರವಾನ್ವಿತ ರಾಜ್ಯಪಾಲರು ಬಳಸಿರುವ ವಿಡಂಬನೆ ಮತ್ತು ಪದಗಳು ಅವರ ವೈಯಕ್ತಿಕ ಅಭಿಪ್ರಾಯಗಳಂತೆ ಇವೆ ಎಂದು ಶರದ್ ಪವಾರ್ ತಮ್ಮ ಪತ್ರ ಉಲ್ಲೇಖಿಸಿದ್ದಾರೆ. ಅಲ್ಲದೆ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ  ಗೌರವಾನ್ವಿತ ರಾಜ್ಯಪಾಲರ ವರ್ತನೆಯಿಂದಾಗಿ ತಮಗೆ ತೀವ್ರ ನೋವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT