ದೇಶ

ಘೋರ ಅಪರಾಧಗಳನ್ನು ಮಾಡಿದ ಕೈದಿಗಳಿಗೆ ಪೆರೋಲ್ ನೀಡದಂತೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ!

Vishwanath S

ನವದೆಹಲಿ: ಘೋರ ಅಪರಾಧಗಳನ್ನು ಮಾಡಿದ ಕೈದಿಗಳಿಗೆ ಪೆರೋಲ್ ನೀಡಬಾರದು ಮತ್ತು ತಾತ್ಕಾಲಿಕ ಅವಧಿಗೆ ಕೈದಿಗಳನ್ನು ಬಿಡುಗಡೆ ಮಾಡುವ ಪದ್ಧತಿಗಳನ್ನು ಪರಿಶೀಲಿಸಬೇಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಪೆರೋಲ್ ಮೇಲೆ ಬಿಡುಗಡೆ ಮಾಡುವುದು ಸಂಪೂರ್ಣ ಹಕ್ಕಲ್ಲ. ಇದು ವಿನಾಯಿತಿ ಅಷ್ಟೇ. ಪೆರೋಲ್‍ ಮೇಲೆ ಬಿಡುಗಡೆಯಾಗುವ ಕೈದಿಗಳು ಸಮಾಜದಲ್ಲಿ ಅಪಾಯಕಾರಿ ಎಂದು ಭಾವಿಸಬಹುದಾಗಿದೆ. ಸಮಾಜದಲ್ಲಿ ಅಶಾಂತಿ, ಗಲಭೆ, ದಂಗೆ, ದೌರ್ಜನ್ಯ, ಭಯೋತ್ಪಾದಕ ಅಪರಾಧಗಳು, ಸುಲಿಗೆಗಾಗಿ ಅಪಹರಣ, ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾದ ಕೈದಿಗಳನ್ನು ಪೆರೋಲ್‍ ಮೇಲೆ ಬಿಡುಗಡೆ ಮಾಡಬಾರದು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಗೃಹ ಸಚಿವಾಲಯ ಸಲಹೆ ನೀಡಿದೆ.

ಇಂತಹ ಕೈದಿಗಳ ತಾತ್ಕಾಲಿಕ ಬಿಡುಗಡೆಯನ್ನು ಪರಿಗಣಿಸುವಾಗ  ರಾಜ್ಯ ಸರ್ಕಾರಗಳು ಮನೋವಿಜ್ಞಾನಿ, ಅಪರಾಧಶಾಸ್ತ್ರಜ್ಞ ಅಥವಾ ತಿದ್ದುಪಡಿ ಆಡಳಿತ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅವರು ನೀಡಿದ ಅಭಿಪ್ರಾಯ-ಸಲಹೆಯನ್ನು ಪಡೆಯಬೇಕು ಎಂದು ಗೃಹಸಚಿವಾಲಯ ತಿಳಿಸಿದೆ.

ಪೆರೋಲ್ ವಾಡಿಕೆಯ ವಿಷಯವಾಗಿ ನೀಡಲಾಗುವುದಿಲ್ಲ. ಇದನ್ನು ಅಧಿಕಾರಿಗಳು ಮತ್ತು ನಡವಳಿಕೆಯ ತಜ್ಞರ ಸಮಿತಿಯು ನಿರ್ಧರಿಸಬಹುದಾಗಿದೆ. ಲೈಂಗಿಕ ಅಪರಾಧಗಳು, ಕೊಲೆ, ಅಥವಾ ಮಕ್ಕಳ ಅಪಹರಣದಂತಹ ಪೈಶಾಚಿಕ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಕೈದಿಗಳಿಗೆ ಪೆರೋಲ್‍ ನೀಡಬಾರದು ಎಂದು ಸಚಿವಾಲಯ ತನ್ನ ಸಲಹೆಯಲ್ಲಿ ಸ್ಪಷ್ಟಪಡಿಸಿದೆ.

SCROLL FOR NEXT