ದೇಶ

ಯಾವುದೇ ವಿಚಾರದ ಚರ್ಚೆಯಿಂದ ಹಿಂದಕ್ಕೆ ಸರಿಯುವುದಿಲ್ಲ: ಪ್ರಶ್ನೋತ್ತರ ಅವಧಿ ರದ್ದು ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

Manjula VN

ನವದೆಹಲಿ: ಯಾವುದೇ ವಿಚಾರದ ಚರ್ಚೆಯಿಂದ ಹಿಂದಕ್ಕೆ ಸರಿಯವುದಿಲ್ಲ. ಪ್ರತೀ ವಿಚಾರದ ಬಗ್ಗೆಯೂ ಚರ್ಚೆ ನಡೆಸಲು ಸಿದ್ದರಿದ್ದೇವೆಂದು ಹೇಳುವ ಮೂಲಕ ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಯನ್ನು ಮೊಟಕುಗೊಳಿಸಿದ ನಿರ್ಧಾರವನ್ನು ಕೇಂದ್ರ ಸರ್ಕಾರ ಸೋಮವಾರ ಸಮರ್ಥಿಸಿಕೊಂಡಿದೆ. 

ಕಲಾಪದ ವೇಳೆ ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದರು. 

ಪ್ರಶೋತ್ತರ ಅವಧಿ ಗೋಲ್ಡನ್ ಅವಧಿ ಇದ್ದಂತೆ. ಆದರೆ, ನೀವು ಪರಿಸ್ಥಿತಿಯ ಕಾರಣ ನೀಡಿ ಈ ಅವಧಿಯನ್ನು ಮೊಟಕುಗೊಳಿಸಿರುವುದಾಗಿ ಹೇಳುತ್ತಿದ್ದೀರಿ. ಕಲಾಪವನ್ನು ನಡೆಸಿ. ಆದರೆ, ಪ್ರಶ್ನೋತ್ತರ ಅವಧಿಗೂ ಅವಕಾಶ ನೀಡಿ. ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಯನ್ನು ರದ್ದುಗೊಳಿಸುವ ಮೂಲಕ ನೀವು ಪ್ರಜಾಪ್ರಭುತ್ವದ ಕತ್ತುಹಿಸುಕುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಹೇಳಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕಸಭಾ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಯವರು. ಇದೊಂದು ಅಸಾಧಾರಣ ಪರಿಸ್ಥಿತಿಯಾಗಿದ್ದು, ಉಭಯ ಸದನಗಳನ್ನು ಒಮ್ಮೆಲೆ ಕಾರ್ಯ ನಡೆಸಲು ಸಾಧ್ಯವಾಗದ ಸಂದರ್ಭದಲ್ಲಿಯೂ ನಾವಿಲ್ಲಿ ಸುಮಾರು 800-850 ಸಂಸದರು ಒಟ್ಟಿಗೆ ಭೇಟಿಯಾಗಿದ್ದೇವೆ. ಸರ್ಕಾರವನ್ನು ಪ್ರಶ್ನಿಸಲು ಹಲವು ಮಾರ್ಗಗಳಿವೆ. ಸರ್ಕಾರ ಯಾವುದೇ ಚರ್ಚೆಗಳಿಂದಲೂ ಓಡಿ ಹೋಗುತ್ತಿಲ್ಲ. ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆಂದು ತಿಳಿಸಿದರು. 

ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 30 ನಿಮಿಷಗಳ ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಬಹುತೇಕ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದರು. ಸ್ಪೀಕರ್ ಕೈಗೊಂಡ ನಿರ್ಧಾರವನ್ನು ನಾವು ಒಪ್ಪಿದ್ದೇವೆ. ಕೊರೋನಾದಂತಹ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಸದನದಲ್ಲಿರುವ ಪ್ರತೀಯೊಬ್ಬ ಸದಸ್ಯರೂ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದರು. 

SCROLL FOR NEXT