ನವದೆಹಲಿ: ಸಂಸದರ ವೇತನ, ಭತ್ಯೆಯನ್ನು ಶೇ. 30 ರಷ್ಟು ಕಡಿತಗೊಳಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಇದಕ್ಕೂ ಮುನ್ನ ಕೇಂದ್ರ ಸಚಿವರಾದ ಜಿ. ಕಿಶನ್ ರೆಡ್ಡಿ ಮತ್ತು ಪ್ರಹ್ಲಾದ್ ಜೋಷಿ, ಸಚಿವರ ವೇತನ, ಭತ್ಯೆ ತಿದ್ದುಪಡಿ ಹಾಗೂ ಸಂಸದರ ವೇತನ, ಭತ್ಯೆ, ಪಿಂಚಣಿ ಮಸೂದೆ 2020ನ್ನು ರಾಜ್ಯಸಭೆಯಲ್ಲಿ ಮಂಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪರವಾಗಿ ಮಸೂದೆಯನ್ನು ಮಂಡಿಸುತ್ತಿರುವುದಾಗಿ ಗೃಹ ಖಾತೆ ಸಹಾಯಕ ಸಚಿವರು ರಾಜ್ಯಸಭೆಯಲ್ಲಿ ಹೇಳಿದರು. ಮಸೂದೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್, ಬಿಜೆಡಿ ಮತ್ತಿತರ ಪಕ್ಷಗಳ ಸದಸ್ಯರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಆದಷ್ಟು ಬೇಗ ಪುನರ್ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದರು.
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಜನರಿಗೆ ನೆರವಾಗಲು ಸಂಸದರ ಪ್ರದೇಶಾಭಿವೃದ್ಧಿಯನ್ನು ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಸಂಸದರು ಹೇಳಿದರು.ಸೋಮವಾರದಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನ ಅಕ್ಟೋಬರ್ 1 ರಂದು ಕೊನೆಗೊಳ್ಳಲಿದೆ.