ದೇಶ

ಪ್ರಾರ್ಥನಾ ಸ್ಥಳಗಳ ಕಾಯ್ದೆ ರದ್ದು ಮಾಡಿ, ಧ್ವಂಸಗೊಂಡ ದೇವಾಲಯಗಳನ್ನು ಮತ್ತೆ ನಿರ್ಮಿಸಿ: ಪ್ರಧಾನಿಗೆ ಮುಸ್ಲಿಂ ನಾಯಕ

Srinivas Rao BV

ನವದೆಹಲಿ: ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, 1991 ರಲ್ಲಿ ಜಾರಿಗೆ ತರಲಾದ ಪ್ರಾರ್ಥನಾ ಸ್ಥಳಗಳ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. 

1991 ರಲ್ಲಿ ಮುಸ್ಲಿಮರನ್ನು ಓಲೈಕೆ ಮಾಡಲು ಈ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು ಎಂದು ರಿಜ್ವಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಇದೇ ವೇಳೆ ಮುಘಲರು ಧ್ವಂಸಗೊಳಿಸಿದ್ದ ದೇವಸ್ಥಾನಗಳನ್ನು ಮರುನಿರ್ಮಾಣ ಮಾಡಬೇಕೆಂದೂ ರಿಜ್ವಿ ಪತ್ರದಲ್ಲಿ ಆಗ್ರಹಿಸಿದ್ದು ದೇವಾಲಯಗಳ ಅವಶೇಷಗಳಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಮಸೀದಿಗಳನ್ನು ತೆರವುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. 

ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ವಿಮೋಚನೆಗೆ ಅರ್ಜಿ ಸಲ್ಲಿ ಸಲ್ಲಿಸಿರುವ ಬೆನ್ನಲ್ಲೇ ವಸೀಮ್ ರಿಜ್ವಿ ಅವರು ಪ್ರಧಾನಿಗೆ ಪತ್ರ ಬರೆದು ಈ ಬೇಡಿಕೆಗಳನ್ನು ಮುಂದಿಟ್ಟಿರುವುದು ಮಹತ್ವ ಪಡೆದುಕೊಂಡಿದೆ. 

"ಪ್ರಾರ್ಥನಾ ಸ್ಥಳಗಳ ಕಾಯ್ದೆ, 1991 ನ್ನು ಕಾಂಗ್ರೆಸ್ ಸರ್ಕಾರ ಕೆಲವು ಮುಸ್ಲಿಮ್ ಸಂಘಟನೆಗಳನ್ನು ಓಲೈಕೆಗಾಗಿ ಹಾಗೂ ಹಿಂದೂಗಳ ಹಕ್ಕನ್ನು ಉಲ್ಲಂಘಿಸುವುದಕ್ಕಾಗಿ ಜಾರಿಗೆ ತಂದಿತ್ತು ಇದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸುತ್ತೇನೆ" ಎಂದು ಪತ್ರದಲ್ಲಿ ರಿಜ್ವಿ ತಿಳಿಸಿದ್ದಾರೆ

ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ, ಮುಘಲ್ ಆಡಳಿತಗಾರರು ನಡೆಸಿದ್ದ ಶೋಷಣೆಯನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಆದರೆ ಧಾರ್ಮಿಕವಾಗಿ ಸಲ್ಲಬೇಕಾದ್ದನ್ನು ದೇಶದ ಹಿಂದೂಗಳಿಗೆ ಮರಳಿ ನೀಡಿದರೆ ಅವರಿಗೆ ನ್ಯಾಯ ಒದಗಿಸಿದಂತಾಗಲಿದೆ ಎಂದು ರಿಜ್ವಿ ಅಭಿಪ್ರಾಯಪಟ್ಟಿದ್ದಾರೆ. 

ಪತ್ರದಲ್ಲಿ ರಿಜ್ವಿ ಅಯೋಧ್ಯೆಯ ರಾಮ ಜನ್ಮಭೂಮಿ, ಮಥುರಾದ ಕೃಷ್ಣ ಜನ್ಮಭೂಮಿ, ವಾರಾಣಸಿಯ ವಿಶ್ವನಾಥ ದೇವಾಲಯ ಸೇರಿದಂತೆ ಮೊಘಲರ ದಾಳಿಗೆ ತುತ್ತಾಗಿ ಧ್ವಂಸಗೊಂಡ ಇತರ ದೇವಾಲಯಗಳನ್ನು ಉಲ್ಲೇಖಿಸಿದ್ದಾರೆ. 

SCROLL FOR NEXT