ದೇಶ

ಕಪಿಲ್ ಸಿಬಲ್ ಆಯೋಜಿಸಿದ್ದ ಔತಣಕೂಟದಲ್ಲಿ ಬಿಜೆಪಿ ವಿರುದ್ಧ ರಾಜಕೀಯ ತಂತ್ರ, ಕಾಂಗ್ರೆಸ್ ನಾಯತಕ್ವ ಬಗ್ಗೆ ಚರ್ಚೆ!

Srinivas Rao BV

ನವದೆಹಲಿ: ರಾಜ್ಯಸಭೆ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಔತಣ ಕೂಟ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ ಬಲಿಷ್ಠ ನಾಯಕತ್ವದ ಅಗತ್ಯದ ಕೂಗು ವ್ಯಕ್ತವಾಗಿದೆ. 
 
ಔತಣಕೂಟ ಬಿಜೆಪಿಯನ್ನು ಎದುರಿಸಲು ರಾಜಕೀಯ ಕಾರ್ಯತಂತ್ರದ ಚರ್ಚೆಯ ಕೇಂದ್ರಬಿಂದುವಾಗಿತ್ತು. ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಒಗ್ಗಟ್ಟು ಹಾಗೂ ಕಾಂಗ್ರೆಸ್ ಪಕ್ಷದ ನಾಯಕತ್ವದ ಬದಲಾವಣೆ, ಕಾರ್ಯಶೈಲಿಯ ಬದಲಾವಣೆಯ ವಿಷಯಗಳ ಬಗ್ಗೆ ಈ ಔತಣಕೂಟದಲ್ಲಿ ಚರ್ಚೆಯಾಗಿದೆ. 

ಈ ಔತಣಕೂಟದಲ್ಲಿ ಗಾಂಧಿ ಕುಟುಂಬದ ಗೈರು ಹಾಜರಿ ಕಾಣುತ್ತಿದ್ದದ್ದು ಒಂದೆಡೆಯಾದರೆ ಜಿ-23 ಸದಸ್ಯರಾದ ಗುಲಾಂ ನಬಿ ಆಜಾದ್, ಪಕ್ಷದ ಸಂಸದ ಶಶಿ ತರೂರ್, ಭುಪೇಂದ್ರ ಸಿಂಗ್ ಹೂಡ, ಆನಂದ್ ಶರ್ಮ, ಮನೀಷ್ ತಿವಾರಿ, ಪಿ ಚಿದಂಬರಂ ಅವರು ಭಾಗಿಯಾಗಿದ್ದದ್ದು ಸ್ಪಷ್ಟ ಸಂದೇಶ ರವಾನಿಸುವಂತಿತ್ತು. 

ಈ ಔತಣಕೂಟ ಕೇವಲ ಕಪಿಲ್ ಸಿಬಲ್ ಅವರ ಜನ್ಮದಿನಾಚರಣೆಯ ನಿಮಿತ್ತವಾಗಿರದೇ ಜಿ-23 ನಾಯಕರೊಂದಿಗೆ ಇತರ ವಿಪಕ್ಷಗಳ ನಾಯಕರನ್ನು ಒಟ್ಟಿಗೆ ಸೇರಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆಗೆ ಆಗ್ರಹಿಸಿದ ಸಭೆಯೂ ಆಗಿತ್ತು ಎಂಬುದು ಗಮನಾರ್ಹ ವಿಷಯ. 

ಯುಪಿಎಯೇತರ ನಾಯಕರಾದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿಯ ಸಂಸದ ಡೆರೆಕ್ ಒಬ್ರಿಯಾನ್‌, ಎನ್ ಸಿಯ ಓಮರ್ ಅಬ್ದುಲ್ಲಾ, ಬಿಜು ಜನತಾದಳದ ಪಿನಾಕಿ ಮಿಶ್ರಾ, ಶಿವಸೇನೆಯ ಸಂಜಯ್ ರಾವತ್, ಶಿರೋಮಣಿ ಅಕಾಲಿದಾಳಿದ ನರೇಶ್ ಗುಜ್ರಾಲ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಟಿಡಿಪಿ, ಟಿಆರ್ ಎಸ್, ಡಿಎಂಕೆ, ವೈಎಸ್ ಆರ್, ಟಿಆರ್ ಎಸ್ ನಾಯಕರೂ ಈ ಔತಣ ಕೂಟದಲ್ಲಿ ಭಾಗವಹಿಸಿದ್ದರು.

ಈ ವೇಳೆ ರಾಜಕೀಯ ಕಾರ್ಯತಂತ್ರದ ಬಗ್ಗೆ ಚರ್ಚೆಯಾಗಿದ್ದು, ಕಾಂಗ್ರೆಸ್ ನ್ನು ಬಲಪಡಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಯನ್ನು ಓಮರ್ ಅಬ್ದುಲ್ಲಾ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಬಲಿಷ್ಠಗೊಂಡಾಗಲೆಲ್ಲಾ ವಿಪಕ್ಷಗಳೂ ಬಲಿಷ್ಠಗೊಂಡಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಶರದ್ ಪವಾರ್ ಜಿ-23 ನಾಯಕರಿಗೆ ತಮ್ಮ ಬೆಂಬಲ ಘೋಷಿಸಿದ್ದು "ಪಕ್ಷದ ಒಳಗೆ ಹಾಗೂ ಹೊರಗೆ ಏನೇ ಮಾಡಿದರೂ ನಮ್ಮ ಬೆಂಬಲ ನಿಮಗೆ ಇರಲಿದೆ" ಎಂಬ ಸಂದೇಶ ರವಾನೆ ಮಾಡಿದ್ದಾರೆ. 

ಬೇರೆ ವಿಪಕ್ಷಗಳ ನಾಯಕರು ತಮಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕೆಂಬ ಮನಸಿದ್ದರೂ ಅದಕ್ಕೆ ತಕ್ಕಂತೆ ಕಾಂಗ್ರೆಸ್ ನಲ್ಲಿ ನಾಯಕತ್ವವೇ ಇಲ್ಲದಿರುವ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. 

SCROLL FOR NEXT