ದೇಶ

ಪಂಜಾಬ್: 2022ರ ಅಸೆಂಬ್ಲಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನಾಂಗಕ್ಕೆ ಟಿಕೆಟ್- ನವಜೋತ್ ಸಿಧು

Nagaraja AB

ಚಂಡಿಘಡ: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಯುವ ಜನಾಂಗಕ್ಕೆ ಹೆಚ್ಚಿನ ಟಿಕೆಟ್ ನೀಡಲಾಗುವುದು ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭಾನುವಾರ ಹೇಳಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನೂತನ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿಧು, ಯುವಕರು ಅವಕಾಶ ಪಡೆಯಬೇಕೆಂದು ಬಯಸಿದ್ದು, ಅರ್ಹರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. 

ಏನೇ ಪ್ರತಿಭೆ ಇದ್ದರೂ ಅವಕಾಶ ಇಲ್ಲದಿದ್ದಾಗ ಪ್ರಯೋಜನವಾಗಲ್ಲ, ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಲಾಗುವುದು, ಕಾರ್ಯಕರ್ತರನ್ನು ಪರಿಗಣಿಸದೆ ಕೆಲವೇ ವ್ಯಕ್ತಿಗಳಿಗೆ ಮಾತ್ರ ಅಧಿಕಾರ ಸಿಮೀತವಾಗಿರುವ ವ್ಯವಸ್ಥೆಯನ್ನು ಬದಲಾಯಿಸಲು ಬಂದಿದ್ದೇನೆ, ಯುವಕರು ಈ ಹಿಂದೆ ಪಡೆಯುತ್ತಿದ್ದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಟಿಕೆಟ್ ಗಳನ್ನು ನೀಡಲಾಗುವುದು ಎಂದು ಅವರು ಪ್ರಕಟಿಸಿದರು. 

ಹಿಂದಿನ ಅಕಾಲಿ ದಳದ ಆಡಳಿತದ ವಿರುದ್ಧ ದಾಳಿ ನಡೆಸಿದ ಸಿಧು, ಗಣಿಗಾರಿಕೆ ವಲಯದಿಂದ ರಾಜ್ಯ ಪ್ರತಿ ವರ್ಷ ಕೇವಲ 40 ಕೋಟಿ ರೂಪಾಯಿ ಗಳಿಸುತ್ತಿದ್ದರೆ ತೆಲಂಗಾಣ ಅದೇ ಕ್ಷೇತ್ರದಿಂದ ವಾರದಲ್ಲಿ 47 ಕೋಟಿ ರೂ. ಗಳಿಸುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಜಾಬ್ ನಕ್ಷೆಯಿಂದ ಮಾಫಿಯಾವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಸಿಧು ಹೇಳಿದರು.

SCROLL FOR NEXT