ಗೋರಖ್ಪುರ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, "ಕೆಂಪು ಟೋಪಿ" ಉತ್ತರ ಪ್ರದೇಶಕ್ಕೆ "ರೆಡ್ ಅಲರ್ಟ್" ಎಂದು ಹೇಳಿದ್ದಾರೆ.
ಇಂದು ಗೋರಖ್ ಪುರದಲ್ಲಿ ಏಮ್ಸ್ ಮತ್ತು ರಸಗೊಬ್ಬರ ಘಟಕ ಸೇರಿದಂತೆ ಮೂರು ಬೃಹತ್ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ಉತ್ತರ ಪ್ರದೇಶದಲ್ಲಿ ಕೆಂಪು ಟೋಪಿ ಧರಿಸಿರುವವರು ಕೆಂಪು ದೀಪದ('ಲಾಲ್ ಬತ್ತಿ') ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅವರು ನಿಮ್ಮ ನೋವು ಮತ್ತು ದುಃಖಗಳ ಬಗ್ಗೆ ಚಿಂತಿಸುವುದಿಲ್ಲ" ಎಂದರು.
ಇದನ್ನು ಓದಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಗೋರಖ್ಪುರದಲ್ಲಿ ಏಮ್ಸ್, ರಸಗೊಬ್ಬರ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ
"ಕೆಂಪು ಟೋಪಿ ಜನರು ಹಗರಣಗಳನ್ನು ಮಾಡಲು, ತಮ್ಮ ಬೊಕ್ಕಸವನ್ನು ತುಂಬಿಕೊಳ್ಳಲು, ಅಕ್ರಮವಾಗಿ (ಸಂಪನ್ಮೂಲಗಳನ್ನು) ದೋಚಲು ಮತ್ತು ಮಾಫಿಯಾಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ಅಧಿಕಾರ ಬಯಸುತ್ತಿದ್ದಾರೆ" ಎಂದು ಪ್ರಧಾನಿ ಸಮಾಜವಾದಿ ಪಕ್ಷವನ್ನು ಟೀಕಿಸಿದರು.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪ್ರತಿಸ್ಪರ್ಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, "ರೆಡ್ ಕ್ಯಾಪ್ ಜನರು ಭಯೋತ್ಪಾದಕರ ಪರವಾಗಿ ಕೆಲಸ ಮಾಡಲು ಮತ್ತು ಅವರನ್ನು ಜೈಲಿನಿಂದ ಮುಕ್ತಗೊಳಿಸಲು ಸರ್ಕಾರ ರಚಿಸಲು ಬಯಸುತ್ತಾರೆ. ಆದ್ದರಿಂದ, ಕೆಂಪು ಟೋಪಿ ಧರಿಸುವವರು ಉತ್ತರ ಪ್ರದೇಶ ರೆಡ್ ಅಲರ್ಟ್ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇದು ಎಚ್ಚರಿಕೆಯ ಗಂಟೆ" ಎಂದಿದ್ದಾರೆ.
ರೆಡ್ ಕ್ಯಾಪ್ ಸಮಾಜವಾದಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಟ್ರೇಡ್ಮಾರ್ಕ್ ಆಗಿದೆ.