ನವದೆಹಲಿ: ಭಾರತದ ವಯಸ್ಕ ಜನಸಂಖ್ಯೆಗೆ ಡಿಸೆಂಬರ್ ವೇಳೆಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಈಗ ತನ್ನ ಭರವಸೆಯಿಂದ ಕೇಂದ್ರ ಸರ್ಕಾರ ಹಿಂದೆಸರಿದಿದೆ.
ಕೇಂದ್ರ ಸರ್ಕಾರದ ಈ ನಡೆ ಮತ್ತೆ ವಿವಾದಕ್ಕೆ ಈಡಾಗಿದೆ. ಡಿಸೆಂಬರ್ ವೇಳೆಗೆ ವಯಸ್ಕ ಜನಸಂಖ್ಯೆಗೆ ಸಂಪೂರ್ಣ ಲಸಿಕೆ ನೀಡುವುದಾಗಿ ಭಾರತ ಸರ್ಕಾರ ಭರವಸೆ ನೀಡಿತ್ತು. ಆಡರೆ ಈಗ "ಅಭಿಯಾನವನ್ನು ಪೂರ್ಣಗೊಳಿಸುವುದಕ್ಕೆ ಯಾವುದೇ ನಿಗದಿತ ಕಾಲಮಿತಿ ಇಲ್ಲ" ಎಂದು ಹೇಳಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವಾಲಯ, ಸಾಂಕ್ರಾಮಿಕ ವೈರಾಣು ವಿಕಸನಗೊಳ್ಳುತ್ತಿರುವ ಬಗೆಯ ದೃಷ್ಟಿಯಿಂದ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸುವುದಕ್ಕೆ ನಿರ್ದಿಷ್ಟ ಕಾಲಮಿತಿ ಇಲ್ಲ ಎಂದು ಹೇಳಿದೆ.
18 ವರ್ಷಗಳ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳಿಗೆ ಡಿಸೆಂಬರ್ ವೇಳೆಗೆ ಲಸಿಕೆಯನ್ನು ನೀಡಲಾಗುವ ನಿರೀಕ್ಷೆ ಇದೆ. ಈ ವರೆಗೂ ಲಸಿಕೆ ಅಭಿಯಾನಕ್ಕಾಗಿ ಲಸಿಕೆ ಸಂಗ್ರಹ ಹಾಗೂ ಅದರ ಕಾರ್ಯನಿರ್ವಹಣೆಯ ವೆಚ್ಚಗಳೂ ಸೇರಿ ಒಟ್ಟು 9,725 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಹಿರಿಯ ಸರ್ಕಾರಿ ಅಧಿಕಾರಿಗಳು ಲಸಿಕೆ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದು, "ಕೇಂದ್ರ ಸರ್ಕಾರ 95 ಕೋಟಿ ಜನಸಂಖ್ಯೆಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುವುದಕ್ಕೆ ಯತ್ನಿಸುತ್ತಿದೆ ಎಂದು ಹೇಳಿದ್ದು, ಇದೇ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರದ ಮೂಲಕ ಸಲ್ಲಿಸಲಾಗಿದೆ.
ಈ ವರೆಗೂ 42 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ಡೋಸ್ ಗಳನ್ನು ನೀಡಲಾಗಿದ್ದು, ಜುಲೈ ನಲ್ಲಿ 51 ಕೋಟಿ ಡೋಸ್ ಗಳು ಲಭ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.