ದೇಶ

ರಸಗೊಬ್ಬರ ಹಗರಣ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರ್‌ಜೆಡಿ ಸಂಸದ ಅಮರೇಂದ್ರ ಧಾರಿ ಸಿಂಗ್ ಬಂಧಿಸಿದ ಇಡಿ!

Vishwanath S

ನವದೆಹಲಿ: ರಸಗೊಬ್ಬರ ಹಗರಣ ಮತ್ತು 685 ಕೋಟಿ ರೂ.ಗೆ ಕಿಕ್‌ಬ್ಯಾಕ್ ಪಾವತಿಗಾಗಿ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಸಂಸದ ಅಮರೇಂದ್ರ ಧಾರಿ ಸಿಂಗ್ ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. 

61 ವರ್ಷದ ರಾಜ್ಯಸಭಾ ಸದಸ್ಯ ಮತ್ತು ಉದ್ಯಮಿ ಅಮರೇಂದ್ರ ಧಾರಿ ಸಿಂಗ್ ರನ್ನು ಡಿಫೆನ್ಸ್ ಕಾಲೋನಿ ಪ್ರದೇಶದ ನಿವಾಸದಿಂದ ಬುಧವಾರ ರಾತ್ರಿ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ) ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನಕ್ಕೂ ಮುನ್ನ ಶೋಧ ನಡೆಸಲಾಯಿತು. ಅಲ್ಲದೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೆ ವಿಚಾರಣೆಗೆ ಸಹಕರಿಸಲಿಲ್ಲ ಎಂದು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಡಿಗ್ ವಿನಯ್ ಸಿಂಗ್ ಅವರು ಅಮರೇಂದ್ರ ಸಿಂಗ್ ರನ್ನು 10 ದಿನಗಳ ಇಡಿ ಕಸ್ಟಡಿಗೆ ಆದೇಶಿಸಿದ್ದು. ಮತ್ತೆ ಜೂನ್ 13ಕ್ಕೆ ಮತ್ತೆ ಕೋರ್ಟ್ ಹಾಜರುಪಡಿಸಲಾಗುತ್ತದೆ.

ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಯುಎಸ್ ಅವಸ್ಥಿ ಮತ್ತು ಇಂಡಿಯನ್ ಪೊಟ್ಯಾಶ್ ಲಿಮಿಟೆಡ್(ಐಪಿಎಲ್) ವ್ಯವಸ್ಥಾಪಕ ನಿರ್ದೇಶಕ ಪಿಎಸ್ ಗಹ್ಲಾತ್ ಮತ್ತು ಇತರರಿಗೆ 2007ರಿಂದ 14ರವರೆಗೆ ಸಾಗರೋತ್ತರ ಪೂರೈಕೆದಾರರಿಗೆ 685 ಕೋಟಿ ರೂ.ಗಳ ಮೌಲ್ಯದ ಅಕ್ರಮ ಕಮಿಷನ್ ನೀಡಲಾಗಿದೆ ಎಂದು ಆರೋಪವಿದೆ. 

ಅಗುಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಚಾಪರ್ಸ್ ಡೀಲ್ ಪ್ರಕರಣದ ಆರೋಪಿ ರಾಜೀವ್ ಸಕ್ಸೇನಾ ಮೂಲಕ ಈ ವಹಿವಾಟು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಬಿಹಾರ ಮೂಲದ ಆರ್ ಜೆಡಿ ಪಕ್ಷ ಅಮರೇಂದ್ರ ಧಾರಿ ಸಿಂಗ್ ರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿತ್ತು. 

SCROLL FOR NEXT