ದೇಶ

ಸಮರೋಪಾದಿಯಲ್ಲಿ 1,500 ಆಮ್ಲಜನಕ ಘಟಕ ನಿರ್ಮಾಣ, ಪ್ರತಿ ಜಿಲ್ಲೆಗೂ ಆಕ್ಸಿಜನ್ ತಲುಪುವಂತೆ ಕ್ರಮ: ಪ್ರಧಾನಿ ಮೋದಿ

Srinivasamurthy VN

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಎದುರಿಸಲು ದೇಶಾದ್ಯಂತ ಸಮರೋಪಾದಿ ಕಾರ್ಯಗಳು ನಡೆಯುತ್ತಿದ್ದು, ದೇಶದ ಪ್ರತೀ ಜಿಲ್ಲೆಗೂ ಆಮ್ಲಜನಕ ತಲುಪುವಂತೆ ದೇಶಾದ್ಯಂತ 1500 ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಶುಕ್ರವಾರ ಕೋವಿಡ್ ಹೋರಾಟದಲ್ಲಿನ ಮುಂಚೂಣಿ ಹೋರಾಟಗಾರರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಕ್ರ್ಯಾಶ್ ಕೋರ್ಸ್)ಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಾಂಕ್ರಾಮಿಕ ಇನ್ನೂ ಮುಕ್ತಾಯವಾಗಿಲ್ಲ. ಜನರು ಅತ್ಯಂತ ಜಾಗರೂಕರಾಗಿರಬೇಕು, ವೈರಸ್ "ನಮ್ಮ ನಡುವೆ ಇನ್ನೂ  ಇದೆ. ಅದು ರೂಪಾಂತರಗೊಳ್ಳುವ ಸಾಧ್ಯತೆಯೂ ಇದೆ. ಕೊರೋನಾ ವೈರಸ್ ಎರಡನೇ ತರಂಗದಲ್ಲಿ, ಈ ವೈರಸ್ ನ ಬದಲಾಗುತ್ತಿರುವ ರೂಪವು ನಮ್ಮ ಮುಂದೆ ಯಾವ ರೀತಿಯ ಸವಾಲುಗಳನ್ನು ತರಬಹುದು ಎಂಬುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

ಮುಂದಿನ ಸವಾಲುಗಳನ್ನು ಎದುರಿಸಲು ನಾವು ದೇಶದ ಸನ್ನದ್ಧತೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಜೂನ್ 21 ರಿಂದ ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಸುಮಾರು 1 ಲಕ್ಷ ಮುಂಚೂಣಿ "ಕೊರೋನಾ ಯೋಧರನ್ನು"  ತಯಾರಿಸುವ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದರು. 1,500 ಕ್ಕೂ ಹೆಚ್ಚು ಆಮ್ಲಜನಕ ಸ್ಥಾವರಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ ಮತ್ತು ಪ್ರತಿ ಜಿಲ್ಲೆಯನ್ನು ತಲುಪುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೋದಿ ಹೇಳಿದರು.

 'ಕೋವಿಡ್-19 ಫ್ರಂಟ್ಲೈನ್ ​​ಕಾರ್ಯಕರ್ತರಿಗಾಗಿ ಕಸ್ಟಮೈಸ್ ಮಾಡಿದ ಕ್ರ್ಯಾಶ್ ಕೋರ್ಸ್ ಕಾರ್ಯಕ್ರಮವು ದೇಶಾದ್ಯಂತ ಒಂದು ಲಕ್ಷ "ಕೋವಿಡ್ ಯೋಧರನ್ನು" ಕೌಶಲ್ಯ ಮತ್ತು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.  

SCROLL FOR NEXT