ದೇಶ

ಕೋವಿಡ್-19 2ನೇ ಅಲೆ ಹತೋಟಿಗೆ ತರಲು ದೇಶಾದ್ಯಂತ ಲಾಕ್ಡೌನ್ ಕೂಡ ಒಂದು ಆಯ್ಕೆ: ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್

Srinivasamurthy VN

ನವದೆಹಲಿ: ದೇಶಾದ್ಯಂತ ಅಬ್ಬರಿಸುತ್ತಿರುವ ಕೋವಿಡ್-19 2ನೇ ಅಲೆಯನ್ನು ಹತೋಟಿಗೆ ತರಲು ಇರುವ ಆಯ್ಕೆಗಳಲ್ಲಿ ದೇಶಾದ್ಯಂತ ಲಾಕ್ಡೌನ್ ಕೂಡ ಒಂದು ಎಂದು ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ನ ಮುಖ್ಯಸ್ಥ ವಿಕೆ ಪಾಲ್ ಹೇಳಿದ್ದಾರೆ.

ದೇಶದಲ್ಲಿ ಮಾರಕವಾಗಿ ಪ್ರಸರಿಸುತ್ತಿರುವ ಕೋವಿಡ್-19 ಸೋಂಕಿನ ಪ್ರಸರಣ ಸರಪಳಿಯನ್ನು ನಿಗ್ರಹಿಸಲು ಕಠಿಣ ನಿರ್ಬಂಧಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವಂತೆಯೇ ಸೋಂಕು ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಕೂಡ ಒಂದು ಆಯ್ಕೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆ ಮೂಲಕ ದೇಶಾದ್ಯಂತ  ಲಾಕ್ಡೌನ್ ಹೇರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ನ ಮುಖ್ಯಸ್ಛ ಹಾಗೂ ನೀತಿ ಆಯೋಗ ಸದಸ್ಯ (ಆರೋಗ್ಯ) ವಿ.ಕೆ.ಪಾಲ್ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ನಿರ್ಬಂಧಕ್ಕಾಗಿ ದೇಶಾದ್ಯಂತ ಲಾಕ್ಡೌನ್ ಕೂಡ ಒಂದು ಆಯ್ಕೆಯಾಗಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ರಾಷ್ಟ್ರವ್ಯಾಪಿ ಲಾಕ್ಡೌನ್ ಕುರಿತು ಸ್ಪಷ್ಟವಾದ ಸಮತೋಲಿತ ಸಲಹೆಯಿದ್ದು, ಅದೇ ಸಮಯದಲ್ಲಿ ಈ ವ್ಯಾಪ್ತಿಯ ನಿರ್ಬಂಧಗಳಿಗೆ ಹೆಚ್ಚುವರಿಯಾಗಿ ಏನಾದರೂ ಅಗತ್ಯವಿದ್ದರೆ, ಆ ಆಯ್ಕೆಗಳನ್ನು ಯಾವಾಗಲೂ ಸೇರಿಸುವ ಕುರಿತು ಚರ್ಚಿಸಲಾಗುತ್ತಿದೆ. ಆ ನಿರ್ಧಾರಗಳನ್ನು ಅಗತ್ಯವಿರುವಂತೆ ತೆಗೆದುಕೊಳ್ಳಲಾಗುವುದು  ಎಂದು ಹೇಳಿದ್ದಾರೆ.

ಅಂತೆಯೇ, ಈಗಾಗಲೇ ರಾಜ್ಯಗಳಿಗೆ ಬಹಳ ಮಹತ್ವದ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಸೋಂಕಿನ ಸುನಾಮಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಅಂತಿಮವಾಗಿ ಉಳಿದಿರುವ ಏಕೈಕ ಆಯ್ಕೆಯಾಗಿ ದೇಶಾದ್ಯಂತ ಲಾಕ್ ಡೌನ್ ಆಗಿರಬೇಕು ಎಂದು ಹಲವಾರು ತಜ್ಞರು, ಅಭಿವೃದ್ಧಿ  ಹೊಂದಿದ ದೇಶಗಳ ತಜ್ಞರು ಮತ್ತು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ವೈದ್ಯಕೀಯ ಮೂಲಸೌಕರ್ಯ ಮತ್ತು ಪೂರಕ ಆಮ್ಲಜನಕದಂತಹ ಸಂಪನ್ಮೂಲಗಳನ್ನು ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಕ್ರಮಗಳತ್ತ ಮುಖಮಾಡಿದೆ. ಈಗಾಗಲೇ ಭಾರತದ ಹೋರಾಟಕ್ಕೆ ವಿವಿಧ ದೇಶಗಳು ಸಾಥ್ ನೀಡಿವೆ ಎಂದು  ಪಾಲ್ ಹೇಳಿದ್ದಾರೆ.

ಎರಡನೇ ಅಲೆಯನ್ನು ನಿಯಂತ್ರಿಸಲು ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸಮಾನಾಂತರವಾಗಿ ಭಾರತದ ಕೋವಿಡ್-19 ಕಾರ್ಯಪಡೆಯ ಹಲವಾರು ಸದಸ್ಯರು ಕಟ್ಟುನಿಟ್ಟಾದ ರಾಷ್ಟ್ರೀಯ ಲಾಕ್‌ಡೌನ್ ಅನ್ನು ಶಿಫಾರಸು ಮಾಡಿದ್ದಾರೆಂದು ತಿಳಿದುಬಂದಿದೆ. ಕಳೆದ ವಾರ ಕೇಂದ್ರ ಸರ್ಕಾರ ಹಂಚಿಕೊಂಡ  ಮಾರ್ಗಸೂಚಿಗಳನ್ನು ಪಟ್ಟಿ ಮಾಡುವಾಗ ಪಾಲ್, ಶೇ.10ಕ್ಕಿಂತ ಹೆಚ್ಚು ಪರೀಕ್ಷಾ ಸಕಾರಾತ್ಮಕ ದರ ಮತ್ತು ಶೇ.60ಕ್ಕಿಂತ ಹೆಚ್ಚು ಐಸಿಯು ಹಾಸಿಗೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಸ್ಥಳೀಯ ರಾತ್ರಿ ಕರ್ಫ್ಯೂ ಮತ್ತು ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

ಈಗ್ಗೆ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಮಾಡುವ ಕುರಿತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಒಲವು ತೋರಿದ್ದರು. ಆದರೆ ಆರ್ಥಿಕತೆಯ ಮೇಲೆ ಅದರ ಭಾರಿ ಪರಿಣಾಮ ಮತ್ತು ಸಮಾಜದ ದೊಡ್ಡ  ಭಾಗಕ್ಕೆ ಅದು ತರುವ ಸಂಕಷ್ಟಗಳನ್ನು ಆಲೋಚಿಸಿ ಈ ಆಯ್ಕೆಯನ್ನು ಸರ್ಕಾರ ಅಂತಿಮ ಆಯ್ಕೆಯಾಗಿಟ್ಟುಕೊಂಡಿದೆ ಎನ್ನಲಾಗಿದೆ. ಭಾರತದಲ್ಲಿ ಸ್ಥಳೀಯ ರಾಜ್ಯಗಳಲ್ಲಿನ ಕೋವಿಡ್-19 ಸ್ಥಿತಿಯನ್ನು ಅವಲಂಬಿಸಿ ಹಲವಾರು ರಾಜ್ಯಗಳು ರಾಜ್ಯವಾರು ಅಥವಾ ಜಿಲ್ಲಾವಾರು ಲಾಕ್‌ಡೌನ್‌ಗಳನ್ನು ಅಥವಾ  ನಿರ್ಬಂಧಗಳನ್ನು ವಿಧಿಸಿವೆ. 

SCROLL FOR NEXT