ದೇಶ

ಕೇದಾರನಾಥ ಪುನರ್ನಿರ್ಮಾಣ: ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಿಷ್ಟು...

Srinivas Rao BV

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇದಾರನಾಥ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡುವುದಕ್ಕೆ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ಹೊಂದಿದ್ದ ಬದ್ಧತೆ, ಸಮರ್ಪಣಾ ಮನೋಭಾವವನ್ನು ಕೊಂಡಾಡಿದ್ದಾರೆ. 

ತಾವೂ ಸಹ ಬದಲಾಗಿರುವ ಕೇದಾರನಾಥ ಕ್ಷೇತ್ರವನ್ನು ಹಾಗೂ ಶಂಕರಾಚಾರ್ಯರ ಪ್ರತಿಮೆಯನ್ನು ದರ್ಶಿಸಬೇಕೆಂಬ ಆಸೆಯನ್ನು ಮಾಜಿ ಪ್ರಧಾನಿ ದೇವೇಗೌಡ ಬಹಿರಂಗಪಡಿಸಿದ್ದಾರೆ.
 
ಕೇದಾರನಾಥ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಿರುವ ಆದಿ ಶಂಕರಾಚಾರ್ಯರ ಪುತ್ಥಳಿಗೂ ಕರ್ನಾಟಕಕ್ಕೂ ಇರುವ ನಂಟನ್ನು ದೇವೇಗೌಡರು ಸ್ಮರಿಸಿದ್ದು, ಮೈಸೂರು ಶಿಲ್ಪಿ ಅರ್ಜುನ್ ಯೋಗಿರಾಜ್ ಅವರು ಹೆಚ್ ಡಿ ಕೋಟೆಯ ಕೃಷ್ಣಶಿಲೆಯನ್ನು ಬಳಸಿ ಆದಿ ಶಂಕರಾಚಾರ್ಯರ ಶಿಲ್ಪವನ್ನು ರೂಪಿಸಿದ್ದಾರೆ. 

"ಕೇದಾರನಾಥ ಕ್ಷೇತ್ರದ ಬದಲಾವಣೆಗಾಗಿ ನಿಮ್ಮ ಬದ್ಧತೆಯನ್ನು ಅಭಿನಂದಿಸುತ್ತೇನೆ" ಎಂದು ಮೋದಿಗೆ ಬರೆದಿರುವ ಪತ್ರದಲ್ಲಿ ದೇವೇಗೌಡ ತಿಳಿಸಿದ್ದಾರೆ.

ತಾವು ಆದಿ ಶಂಕರಾಚಾರ್ಯರು ಸ್ಥಾಪಿಸಿರುವ 4 ಮಠಗಳ ಪೈಕಿ ಪ್ರಧಾನವಾಗಿರುವ ಶೃಂಗೇರಿ ಪೀಠದ ಕಟ್ಟಾ ಅನುಯಾಯಿ ಎಂದು ಹೇಳಿರುವ ದೇವೇಗೌಡರು, ಶೃಂಗೇರಿ ಮಠ ಶತಮಾನಗಳ ಕಾಲ ಹಲವು ರಾಜರು, ರಾಜವಂಶಗಳಿಗೆ ಮಾರ್ಗದರ್ಶನ ನೀಡಿ, ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುತ್ತಿರುವ ಮಠವಾಗಿದೆ ಎಂದು ಹೇಳಿದ್ದಾರೆ. 

ಮೈಸೂರು ಒಡೆಯರು, ಪೇಶ್ವೆಗಳು, ಕೆಳದಿಯ ಅರಸರು, ತಿರುವಾಂಕೂರು ಮಹಾರಾಜರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ನಿಜಾಮರು ಸೇರಿದಂತೆ ಹಲವು ರಾಜಮನೆತನಗಳು ಮಠಕ್ಕೆ ತಮ್ಮ ಭಕ್ತಿ ಸಲ್ಲಿಸುವ ಮೂಲಕ ಅವರಿಂದ ಮಾರ್ಗದರ್ಶನ ಪಡೆಯುವ ಮೂಲಕ ಸಾಕಷ್ಟನ್ನು ಪಡೆದಿವೆ ಎಂದೂ ದೇವೇಗೌಡ ತಮ್ಮ ಪತ್ರದಲ್ಲಿ ಶೃಂಗೇರಿ ಮಠದ ಬಗ್ಗೆ ಉಲ್ಲೇಖಿಸಿದ್ದಾರೆ.

ಶೃಂಗೇರಿ ಮಠ ಇಂದಿಗೂ ತನ್ನನ್ನು ಅರಸಿ ಬರುವವರಿಗೆ ಮಾರ್ಗದರ್ಶನ ನೀಡುತ್ತಿದ್ದು, ನನಗೆ ವೈಯಕ್ತಿಕವಾಗಿ ನನಗೆ ಸಮಾಜದ ಸಾಮರಸ್ಯದ ಕೇಂದ್ರವಾಗಿ ಕಂಡಿದೆ. ಅಲ್ಲಿಂದ ಪಡೆದುಕೊಂಡ ಆಶೀರ್ವಾದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ದೇವೇಗೌಡ ತಿಳಿಸಿದ್ದಾರೆ. 

SCROLL FOR NEXT