ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಸೇರಿದಂತೆ ಎನ್ ಸಿಪಿ ಪಕ್ಷದ ಮುಖಂಡರೊಂದಿಗೆ ಆಪ್ತ ಸಂಪರ್ಕ ಹೊಂದಿರುವ ದುಲೆಯ ಸುನೀಲ್ ಪಾಟಿಲ್ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಆರೋಪಕ್ಕೊಳಗಾಗಿರುವ ಕ್ರೂಸ್ ಡ್ರಗ್ ಕೇಸ್ ನ ಮಾಸ್ಟರ್ ಮೈಂಡ್ ಎಂದು ಬಿಜೆಪಿ ಮುಖಂಡ ಮೋಹಿತ್ ಭಾರತೀಯ ಶನಿವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಭಾರತೀಯ, ಕಠಿಣ ಲಾಕ್ ಡೌನ್ ವೇಳೆಯಲ್ಲಿ ಮುಂಬೈಯಲ್ಲಿನ ಸಹ್ಯಾದ್ರಿ ರಾಜ್ಯ ಅತಿಥಿ ಗೃಹದಲ್ಲಿ ಡ್ರಗ್ ಪೆಡ್ಲರ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿನ ಆಪ್ತ ಚಿಂಕು ಪಠಾಣ್ ಅವರನ್ನು ದೇಶ್ ಮುಖ್ ಭೇಟಿ ಮಾಡಿದ್ದರು ಎಂದು ಆರೋಪಿಸಿದರು.
ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಕ್ರೂಸ್ ಡ್ರಗ್ಸ್ ಕೇಸ್ ಹೊಸ ತನಿಖಾಧಿಕಾರಿ ಹೆಗಲಿಗೆ: ಯಾರು ಈ ಸಂಜಯ್ ಕುಮಾರ್ ಸಿಂಗ್?
ಕ್ರೂಸ್ ಡ್ರಗ್ ಕೇಸ್ ನ ಎನ್ ಸಿಪಿ ಸಾಕ್ಷಿಯಾಗಿರುವ ಕಿರಣ್ ಗೋಸಾವಿ, ಸುನೀಲ್ ಪಾಟೀಲ್ ಅವರ ಸಹಚರರಾಗಿದ್ದಾರೆ. ಎನ್ ಸಿಬಿಯಿಂದ ಕ್ರೂಸ್ ಹಡಗು ಮೇಲೆ ಅಕ್ಟೋಬರ್ 1 ರಂದು ದಾಳಿಯಾಗುವ ಮೊದಲಿನಿಂದಲೂ ಗೋಸಾವಿ ಮತ್ತು ಸ್ಯಾಮ್ ಡಿಸೋಜಾ ಅವರೊಂದಿಗೆ ಪಾಟೀಲ್ ಸಂಪರ್ಕದಲ್ಲಿದ್ದರು ಎಂದು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಮೋಹಿತ್ ಭಾರತೀಯ ಹೇಳಿದರು.
ಆರ್ಯನ್ ಖಾನ್ ಬಂಧನದ ನಂತರ ಸಮೀರ್ ವಾಂಖೆಡೆಗೆ 8 ಕೋಟಿ ರೂಪಾಯಿ ಸೇರಿದಂತೆ 25 ಕೋಟಿ ರೂಪಾಯಿಗಳ ಪಾವತಿ ಒಪ್ಪಂದದ ಕುರಿತು ಡಿಸೋಜಾ ಅವರೊಂದಿಗೆ ದೂರವಾಣಿಯಲ್ಲಿ ಗೋಸಾವಿ ಮಾತುಕತೆ ನಡೆಸುತ್ತಿರುವುದನ್ನು ನಾನು ಕೇಳಿದ್ದೇನೆ ಎಂದು ಸ್ವತಂತ್ರ ಸಾಕ್ಷಿ ಮತ್ತು ಗೋಸಾವಿಯ ಅಂಗರಕ್ಷಕ ಪ್ರಭಾಕರ್ ಸೈಲ್ ಕಳೆದ ತಿಂಗಳು ಹೇಳಿಕೊಂಡಿದ್ದರು. ವಾಂಖೆಡೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.
ಪಾಟೀಲ್ ಕ್ರೂಸ್ ಡ್ರಗ್ಸ್ ಕೇಸ್ ಹಿಂದಿರುವ ಮಾಸ್ಟರ್ ಮೈಂಡ್, ಅವರು ಎನ್ ಸಿಪಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಕಳೆದ 20 ವರ್ಷಗಳಿಂದ ಅನೇಕ ಎನ್ ಸಿಪಿ ಮುಖಂಡರೊಂದಿಗೆ ಆಪ್ತ ಸಂಪರ್ಕ ಹೊಂದಿರುವುದಾಗಿ ಭಾರತೀಯ ಆರೋಪಿಸಿದರು. ಆದರೆ, ಈ ಆರೋಪ ಸತ್ಯದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿದೆ ಎಂದು ಎನ್ ಸಿಪಿ ವಕ್ತಾರ ನವಾಬ್ ಮಲ್ಲಿಕ್ ಹೇಳಿದ್ದಾರೆ.