ನವದೆಹಲಿ: ಕೊರೋನಾ ವೈರಸ್ನ ಹೊಸ ತಳಿ ಓಮಿಕ್ರಾನ್ ರೂಪಾಂತರಿ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ಬಗ್ಗೆ ವರದಿಯಾಗಿದೆ, ಇದರ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕಾಗಿದೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾದ ಈ ಹೊಸ ತಳಿ ಈಗಾಗಲೇ ಹಾಕಿಸಿಕೊಂಡ ಲಸಿಕೆಯ ಪರಿಣಾಮವನ್ನು ಸಹ ತೊಡೆದುಹಾಕಬಹುದು. ಆದರೆ ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಡಾ. ರಣದೀಪ್ ಗುಲೇರಿಯಾ ಅವರು ಹೇಳಿದ್ದಾರೆ.
ಓಮಿಕ್ರಾನ್ ರೂಪಾಂತರಿ ತಳಿ ಲಸಿಕೆ ಹಾಕಿದ ಜನರಿಗೆ ಸಹ ಸೋಂಕು ತರುತ್ತದೆ. ಈ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಭಾರತದಲ್ಲಿ(India) ಈ ವೇರಿಯಂಟ್ ಸೋಂಕಿತರು ಯಾರೂ ಪತ್ತೆಯಾಗಿಲ್ಲ ಎಂಬುದು ಸಮಾಧಾನದ ಸಂಗತಿ ಎಂದಿದ್ದಾರೆ.
ಇದನ್ನು ಓದಿ: ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬಂದ ಇಬ್ಬರಲ್ಲೂ 'ಓಮಿಕ್ರಾನ್' ಇಲ್ಲ: ದೂರಾದ ಆತಂಕ, ನಿಟ್ಟುಸಿರು ಬಿಟ್ಟ ಜನತೆ
ಅಂತರಾಷ್ಟ್ರೀಯವಾಗಿ ಪ್ರಯಾಣಿಸುವ ಜನರಲ್ಲಿ ಹಠಾತ್ ಹೆಚ್ಚಳವಾಗಿದೆ. ಹೀಗಾಗಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ ಅಗತ್ಯವಿದೆ ಎಂದು ಡಾ ಗುಲೇರಿಯಾ ಅವರು ತಿಳಿಸಿದ್ದಾರೆ.
ಭವಿಷ್ಯದ ಕ್ರಮವು ಅದರ ಹರಡುವಿಕೆ, ತೀವ್ರತೆ ಮತ್ತು ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ.