ಲಖೀಂಪುರ್ ಖೇರ್: ಲಖೀಂಪುರ್ ಖೇರ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ವ್ಯವಹಾರಗಳ ರಾಜ್ಯ ಸಚಿವ ಅಜಯ್ ತೇನಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಅವರು, ಘಟನೆ ನಡೆಯುವಾಗ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಕಾರಿನ ಮೇಲೆ ದಾಳಿ ನಡೆದ ನಂತರ ಚಾಲಕನಿಗೆ ಗಾಯವಾಗಿತ್ತು. ಇದರಿಂದ ಅವರು ನಿಯಂತ್ರಣ ತಪ್ಪಿ ಅಲ್ಲಿದ್ದ ಕೆಲವು ಜನರ ಮೇಲೆ ಕಾರು ಹರಿಯಿತು. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ನಾನು ಅನುಕಂಪ ಸೂಚಿಸಿದ್ದೇನೆ. ಈ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯಬೇಕು ಎಂದಿದ್ದಾರೆ.
ಇದನ್ನೂ ಓದಿ: ಲಖೀಂಪುರ್ ಖೇರ್ ಹಿಂಸಾಚಾರ: ರೈತರನ್ನು ಕೆಣಕಿ, ಗುಂಡು ಹಾರಿಸಿದ ಕೇಂದ್ರ ಸಚಿವರ ಪುತ್ರ- ಎಫ್ ಐಆರ್ ನಲ್ಲಿ ಉಲ್ಲೇಖ
ಇನ್ನು ಪಕ್ಷದ ಹೈಕಮಾಂಡ್ ನನಗೆ ಬರಲು ಹೇಳಿಲ್ಲ. ಇಂದು ರಾತ್ರಿ ಅಥವಾ ನಾಳೆ ನಾನು ಕೆಲವು ಕೆಲಸಗಳ ಮೇರೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಸುದ್ದಿಗಾರರು ಪಕ್ಷದ ಹೈಕಮಾಂಡ್ ಕರೆದಿದ್ದಾರೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ವಿಡಿಯೋ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ, ಬಂಧನಕ್ಕೆ ಆಗ್ರಹ
ಕಾರ್ಯಕ್ರಮವೊಂದರಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿರುವ ಆಡಿಯೊದ ಭಾಗವನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ರೈತರ ಜೊತೆಗೆ ಲಖೀಂಪುರ್ ಖೇರ್ ನಲ್ಲಿ ಉಪಸ್ಥಿತರಿದ್ದ ದುಷ್ಕರ್ಮಿಗಳು ಕೆಲವರು ಈ ಹಿಂಸಾಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಹಿಂಸಾಚಾರ ನಡೆದಲ್ಲಿ ಕೆಲವು ಖಲಿಸ್ತಾನಿಯರು ಕೂಡ ಇದ್ದರು. ಬಿಂದ್ರನ್ ವಾಲೆ ಪೋಸ್ಟರ್ ಗಳನ್ನು ನೇತಾಡಿಸಲಾಗಿತ್ತು ಎಂದು ಅಜಯ್ ತೇನಿ ಪ್ರತಿಕ್ರಿಯಿಸಿದ್ದಾರೆ.