ನವದೆಹಲಿ: ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಾಮರ್ಶೆ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದಿಂದ ನಷ್ಟದಲ್ಲಿದ್ದ ದೇಶದ ಆರ್ಥಿಕತೆಯೂ ಕ್ಷಿಪ್ರ ಲಸಿಕೆ ಅಭಿಯಾನ ಹಾಗೂ ಸುಧಾರಣಾ ಕಾರ್ಯತಂತ್ರದಿಂದ ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿದೆ.
ಕೃಷಿಯಲ್ಲಿ ಸುಸ್ಥಿರ ಮತ್ತು ಆರೋಗ್ಯಕರ ಬೆಳವಣಿಗೆ, ಉತ್ಪಾದನೆ ಮತ್ತು ಉದ್ಯಮದಲ್ಲಿ ತೀವ್ರ ಮರುಕಳಿಸುವಿಕೆ, ಸೇವಾ ಚಟುವಟಿಕೆಗಳ ಪುನರಾರಂಭ ಮತ್ತು ಉತ್ಕೃಷ್ಟ ಆದಾಯವು ಆರ್ಥಿಕತೆಯು ಉತ್ತಮ ಪ್ರಗತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸೆಪ್ಟೆಂಬರ್ ತಿಂಗಳ ಪರಾಮರ್ಶೆ ಹೇಳಿದೆ.
ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆ ಗೋಚರಿಸುವುದರೊಂದಿಗೆ ದೇಶ ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿದೆ. ಲಸಿಕಾ ಅಭಿಯಾನದ ಹೊಸ ಮೈಲಿಗಲ್ಲುಗಳ ಜೊತೆಗೆ ಇದುವರೆಗೆ ಕೈಗೊಂಡ ಕಾರ್ಯತಂತ್ರದ ಸುಧಾರಣೆಗಳು ಆರ್ಥಿಕತೆ ಕೋವಿಡ್-19 ಅಲೆ ಹೊಡೆತದಿಂದ ಹೊರಬರುವಂತೆ ಮಾಡುವಲ್ಲಿ ಶಕ್ತವಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.
2021-22ರ ಆರ್ಥಿಕ ವರ್ಷದಲ್ಲಿ ದೇಶದ ಸರಕುಗಳ ರಫ್ತುಗಳು ಸತತ ಆರನೇ ತಿಂಗಳಿಗೆ 30 ಬಿಲಿಯನ್ ಯುಎಸ್ ಡಾಲರ್ ದಾಟಿದ ಕಾರಣ ಬಾಹ್ಯ ವಲಯವು ಭಾರತದ ಬೆಳವಣಿಗೆಯ ಪುನರುಜ್ಜೀವನಕ್ಕೆ ಪ್ರಕಾಶಮಾನವಾದ ನಿರೀಕ್ಷೆಗಳನ್ನು ನೀಡುತ್ತಲೇ ಇದೆ ಎಂದು ಅದು ಹೇಳಿದೆ.
ಸೆಪ್ಟೆಂಬರ್ನಲ್ಲಿ ಸರಕುಗಳ ವ್ಯಾಪಾರ ಕೊರತೆಯೂ ಏರಿಕೆಯಾಗುತ್ತಿದ್ದು, ದೇಶದಲ್ಲಿ ಬಳಕೆ ಮತ್ತು ಹೂಡಿಕೆ ಬೇಡಿಕೆ ಸುಧಾರಿಸಿಕೊಳ್ಳುವುದಕ್ಕೆ ಸ್ಪಷ್ಟ ಪುರಾವೆಗಳಿವೆ, ಬಾಹ್ಯ ಸಾಲದಿಂದ ಜಿಡಿಪಿ ಅನುಪಾತ ಸಹಜ ರೀತಿಯಲ್ಲಿ ಮುಂದುವರಿದಿದ್ದು, ಮಾರ್ಚ್ 2021ರ ಅಂತ್ಯದಲ್ಲಿದ್ದ ಶೇ.21. 1 ರಿಂದ ಜೂನ್ ಅಂತ್ಯದಲ್ಲಿ ಶೇ. 20.2ಕ್ಕೆ ಕುಸಿದಿದೆ.ಹಿಂದಿನ ವರ್ಷಕ್ಕೆ ಹೋಲಿಸಿದರೆ ಸೆಪ್ಟೆಂಬರ್ 10ಕ್ಕೆ ಬ್ಯಾಂಕ್ ಸಾಲದ ಬೆಳವಣಿಗೆ ದರ ಶೇ. 6.7 ರಷ್ಟಿದೆ.