ನವದೆಹಲಿ: ರೈತರ ಧ್ವನಿಯನ್ನು ಅಡಗಿಸುತ್ತಿದ್ದ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡುತ್ತಾ, ರೈತರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣದ ತುಣಕುವೊಂದನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ವಿಶಾಲ ಹೃದಯದ ನಾಯಕನಿಂದ ಜಾಣ್ಮೆಯ ಮಾತುಗಳು ' ಎಂಬ ಶೀರ್ಷಿಕೆಯಡಿ ವರುಣ್ ಗಾಂಧಿ, ವಾಜಪೇಯಿ ಅವರ ಭಾಷಣದ ತುಣಕುವೊಂದನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಹಿಂಸಾಚಾರವನ್ನು ಹಿಂದು vs ಸಿಖ್ ಕದನವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ: ಸಂಸದ ವರುಣ್ ಗಾಂಧಿ
ಮೋದಿ ಸರ್ಕಾರ ಜಾರಿಗೊಳಿಸುವ ಮೂರು ಕೃಷಿ ಕಾನೂನುಗಳ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ, ವಾಜಪೇಯಿ ಅವರ ಭಾಷಣವನ್ನು ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶ ಕಳುಹಿಸಿದ್ದಾರೆ.
ಸರ್ಕಾರ ರೈತರನ್ನು ದಮನಿಸಿದರೆ, ಕಾನೂನು ದುರುಪಯೋಗಪಡಿಸಿಕೊಂಡರೆ ಮತ್ತು ಶಾಂತಿಯುತ ಹೋರಾಟವನ್ನು ಕೆಡಿಸಿದರೆ, ರೈತರ ಹೋರಾಟದೊಂದಿಗೆ ಕೈ ಜೋಡಿಸಲು ನಾಚಿಕೆಪಡಬೇಕಾಗಿಲ್ಲ, ಅವರೊಂದಿಗೆ ನಿಲ್ಲುತ್ತೇವೆ ಎಂದು ವಾಜಪೇಯಿ ಹೇಳುವುದು ಈ ವಿಡಿಯೋದಲ್ಲಿದೆ.
ರೈತರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವರುಣ್ ಗಾಧಿ ಆಗ್ರಹಿಸಿದ ನಂತರ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈ ಬಿಡಲಾಗಿದೆ.