ದೇಶ

ಕಣಿವೆ ಪ್ರದೇಶದ ನಾಗರಿಕರ ಹತ್ಯೆಯಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ- ಫಾರೂಖ್ 

Nagaraja AB

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ನಾಗರಿಕರ ಹತ್ಯೆಯಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ. 

ಕಾಶ್ಮೀರಿಗಳಿಗೆ ಅಪ ಖ್ಯಾತಿ ತರುವ ಸಂಚಿನಿಂದ ಈ ದಾಳಿಗಳನ್ನು ನಡೆಸಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನಾಗರಿಕರ ಹತ್ಯೆ  ಶಾಂತಿಯುತ ವಾತವಾರಣಕ್ಕೆ ಭಂಗವನ್ನುಂಟು ಮಾಡುವ ಪ್ರಯತ್ನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ, ಮತ್ತೆ ಇಬ್ಬರನ್ನು ಗುಂಡಿಕ್ಕಿ ಕೊಂದ ಉಗ್ರರು
ಶ್ರೀನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹತ್ಯೆಗಳು ದುರಾದೃಷ್ಟಕರವಾಗಿದ್ದು, ಪಿತೂರಿಯ ಕೆಲಸವಾಗಿದೆ. ಕಾಶ್ಮೀರಿಗಳಿಗೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ ಎಂದರು. 

ಜಮ್ಮು-ಕಾಶ್ಮೀರದ ಪುಲ್ವಾಮ ಮತ್ತು ಶ್ರೀನಗರದಲ್ಲಿ ಶನಿವಾರ ಉಗ್ರರಿಂದ ಸ್ಥಳೀಯರಲ್ಲದ ಇಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದಕ್ಕೂ ಹಿಂದೆ ನಾಲ್ವರು ಅಲ್ಪಸಂಖ್ಯಾತ ಸಮುದಾಯದರು ಸೇರಿದಂತೆ ಏಳು ಮಂದಿಯನ್ನು ಕಾಶ್ಮೀರದಲ್ಲಿ ಉಗ್ರರು ಹತ್ಯೆ ಮಾಡಿದ್ದರು. ಇದರಿಂದಾಗಿ ಕಣಿವೆ ಪ್ರದೇಶದಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದ್ದು, ಸುರಕ್ಷತೆ ಬಗ್ಗೆ ರಾಜಕೀಯ ಪಕ್ಷಗಳು ಟೀಕಾ ಪ್ರಹಾರ ನಡೆಸುತ್ತಿವೆ.

ಭಾರತ ಮತ್ತು ಪಾಕಿಸ್ತಾನ ನಡುವಣ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಕುರಿತಂತೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ಸ್ನೇಹಕ್ಕೆ ಕಾರಣವಾಗುವ ಯಾವುದೇ ಕಾರ್ಯಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದರು. ಉಭಯ ದೇಶಗಳ ನಡುವಣ ಸ್ನೇಹ ಮತ್ತು ಶಾಂತಿಯುತವಾಗಿ ಬಾಳಲು ನಾವು ಪ್ರಾರ್ಥಿಸಬೇಕಾಗಿದೆ ಎಂದರು. 

SCROLL FOR NEXT