ದೇಶ

ಕೊಲ್ಲಂ ಕರಾವಳಿಯಲ್ಲಿ ದೋಣಿ ಮುಳುಗಿ ನಾಲ್ವರು ಮೀನುಗಾರರು ಸಾವು, 12 ಮಂದಿ ರಕ್ಷಣೆ

Lingaraj Badiger

ಕೊಲ್ಲಂ: ಕೊಲ್ಲಂ ಕರಾವಳಿಯ ಅಝಿಕಲ್ ಬಳಿ ಗುರುವಾರ ಮುಂಜಾನೆ ಮೀನುಗಾರಿಕಾ ದೋಣಿ ಮುಳುಗಿ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ. ದೋಣಿಯಲ್ಲಿದ್ದ ಇತರ 12 ಜನರನ್ನು ರಕ್ಷಿಸಲಾಗಿದೆ.

ಮೃತಪಟ್ಟವರನ್ನು ಕಾಯಂಕುಳಂ ನಿವಾಸಿಗಳಾದ ಸುದೇವನ್(51), ಸುನಿಲ್ ದತ್ (24), ಓಚಿರಾ ನಿವಾಸಿಗಳಾದ ಶ್ರೀಕುಮಾರ್ (45) ಮತ್ತು ನೆಡಿಯತ್‌ನ ತಂಕಪ್ಪನ್ (60)  ಎಂದು ಗುರುತಿಸಲಾಗಿದೆ.

ಕರಾವಳಿ ಪೊಲೀಸರ ಪ್ರಕಾರ, ಇಂದು ಬೆಳಗ್ಗೆ 5.30 ರ ಸುಮಾರಿಗೆ ಮೀನುಗಾರಿಕೆಗೆ ಅಲಪುಳಾದ ವಲಿಯಾ ಅಝಿಕಲ್ ಕರಾವಳಿಯಿಂದ ಹೊರಟ 'ಓಮಕರಂ' ಹೆಸರಿನ ದೋಣಿಯಲ್ಲಿ 16 ಮೀನುಗಾರರಿದ್ದರು.  ಅಝಿಕಲ್ ಬಂದರಿನಿಂದ ಐದು ನಾಟಿಕಲ್ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ. 

ಮೀನುಗಾರರು ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದಾಗ ದೋಣಿ ಅಪಘಾತಕ್ಕೀಡಾಗಿದೆ. ಬಲವಾದ ಗಾಳಿಯಿಂದಾಗಿ ದೋಣಿ ಮಗುಚಿದೆ ಎಂದು ಹೇಳಲಾಗಿದೆ. 

ದಡದಲ್ಲಿ ಅನೇಕ ಮೀನುಗಾರರು ಇದ್ದ ಕಾರಣ, ಅವರು ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿ, 12 ಮೀನುಗಾರರನ್ನು 
ರಕ್ಷಿಸಿ ಚಿಕಿತ್ಸೆಗಾಗಿ ಕಾಯಂಕುಳಂ, ಓಚಿರಾ ಮತ್ತು ಕರುಣಗಪ್ಪಲ್ಲಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

SCROLL FOR NEXT