ದೇಶ

ಮಹಾರಾಷ್ಟ್ರ: ವರದಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಸಾವು ಶಂಕೆ

Lingaraj Badiger

ಮುಂಬೈ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ಮಂಗಳವಾರ ದೋಣಿಯೊಂದು ಮುಳುಗಿದ್ದು, ಘಟನೆಯಲ್ಲಿ ಕನಿಷ್ಠ 11 ಮಂದಿ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೋಲಿಸ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ಈವರೆಗೆ ನದಿಯಿಂದ ಅಪ್ರಾಪ್ತ ಬಾಲಕಿ ಸೇರಿದಂತೆ ಮೂರು ಮೃತದೇಹಗಳನ್ನು ಹೊರತೆಗೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆನೊಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹತ್ರಾಣ ಗ್ರಾಮದಲ್ಲಿ ಬೆಳಗ್ಗೆ 10: 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೂರು ಕುಟುಂಬಗಳ 11 ಜನರನ್ನು ಹೊತ್ತ ದೋಣಿ ಮಗುಚಿ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ದೋಣಿಯಲ್ಲಿ ಹೆಚ್ಚು ಜನರು ಪ್ರಯಾಣಿಸಿದ್ದರಿಂದ ತೂಕ ಹೆಚ್ಚಾಗಿ ದೋಣಿ ಮುಳುಗಿರುವ ಸಾಧ್ಯತೆ ಇದೆ. ಅವರು ನದಿಯ ದಡದಲ್ಲಿ ಧಾರ್ಮಿಕ ಕ್ರಿಯೆ ಮಾಡಿದ ನಂತರ ದೋಣಿಯಲ್ಲಿ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದುವರೆಗೆ ಮೂರು ಶವಗಳನ್ನು ಹೊರತೆಗೆಯಲಾಗಿದ್ದು, ಇತರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT