ದೇಶ

'ಮೂರು ಬಾರಿ ಅವಮಾನಿಸಲಾಗಿದೆ': ಪಂಜಾಬ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನಂತರ ಕ್ಯಾಪ್ಟನ್ ಅಮರೀಂದರ್ ಸಿಂಗ್

Lingaraj Badiger

ಚಂಡಿಗಢ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ನಾಯಕತ್ವ ಬದಲಾಯಿಸುವಂತೆ 40 ಕಾಂಗ್ರೆಸ್ ಶಾಸಕರು ಒತ್ತಾಯಿಸಿದ ನಂತರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಮರೀಂದ್ ಸಿಂಗ್ ಅವರು ಇಂದು ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೀಂದರ್ ಸಿಂಗ್ ಅವರು, ನಾನು ಅವಮಾನಿತನಾಗಿದ್ದೇನೆ. "ಅವರು ನಂಬುವವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು" ಕಾಂಗ್ರೆಸ್ ಮುಕ್ತವಾಗಿದೆ. "ಸಮಯ ಬಂದಾಗ ನನ್ನ ಮುಂದಿನ ಆಯ್ಕೆಗಳನ್ನು ತಿಳಿಸುತ್ತೇನೆ" ಎಂದು ಹೇಳಿದ್ದಾರೆ.

ಪಂಜಾಬ್ ನ 40 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಇಂದು ಬೆಳಗ್ಗೆ ರಾಜೀನಾಮೆ ನೀಡುವಂತೆ ಅಮರೀಂದರ್ ಸಿಂಗ್ ಅವರಿಗೆ ಸೂಚಿಸಿದ್ದರು. ಈ ವೇಳೆ "ನಾನು ಸಾಕಷ್ಟು ಅವಮಾನವನ್ನು ಸಹಿಸಿಕೊಂಡಿದ್ದೇನೆ. ಈ ರೀತಿಯ ಅವಮಾನ ಸಾಕು, ನನಗೆ ಮೂರನೇ ಬಾರಿ ಅವಮಾನವಾಗುತ್ತಿದೆ. ಈ ರೀತಿಯ ಅವಮಾನದಿಂದ ನಾನು ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ" ಎಂದು "ಕ್ಯಾಪ್ಟನ್" ಅಮರೀಂದರ್ ಸಿಂಗ್ ಅವರು ಸೋನಿಯಾ ಗಾಂಧಿಗೆ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಇಂದು ಸಂಜೆ ಪಕ್ಷದ ಶಾಸಕರ ಸಭೆಯ ನಂತರ ಹೊಸ ನಾಯಕನನ್ನು ನಿರ್ಧರಿಸುವ ನಿರೀಕ್ಷೆಯಿದೆ.

ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನಿಲ್ ಜಖರ್, ಲುಧಿಯಾನಾ ಸಂಸದ ರವನೀತ್ ಸಿಂಗ್ ಬಿಟ್ಟು ಮತ್ತು ರಾಜ್ಯಸಭಾ ಸಂಸದ ಪರ್ತಪ್ ಸಿಂಗ್ ಬಾಜ್ವಾ ಅವರು ನೂತನ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಆದರೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ರೇಸ್ ನಿಂದ ಹೊರಗುಳಿದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

SCROLL FOR NEXT