ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಸಮಿತಿಯ ಪರ ವಾದ ಮಾಡುತ್ತಿದ್ದ ವಕೀಲ ಅಭಯ್ನಾಥ್ ಯಾದವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
62 ವರ್ಷದ ಅಭಯ್ನಾಥ್ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು ಇಂದು ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಅಂಜುಮಾನ್ ಇಂತೇಝಮಿಯಾ ಮಸೀದಿ ಸಮಿತಿ ಪರವಾಗಿ ಹಿರಿಯ ವಕೀಲರಾದ ಅಭಯ್ ನಾಥ್ ವಾದಿಸುತ್ತಿದ್ದರು. ಅಲಹದಾಬಾದ್ ಹೈಕೋರ್ಟ್ ಕಳೆದ ವಾರ ಪ್ರಕರಣದ ವಿಚಾರಣೆ ನಡೆಸಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 3ರಂದು ನಿಗದಿ ಮಾಡಿದೆ. ನಾಡಿದ್ದು ಪ್ರಕರಣದ ವಿಚಾರಣೆಗೆ ಬರುವ ಸಂದರ್ಭದಲ್ಲಿ ವಕೀಲರು ನಿಧನರಾಗಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಹಿಂದು ದೇವರ ವಿಗ್ರಹಗಳು ಮತ್ತು ದೇವಸ್ಥಾನದ ಕುರುಹುಗಳಿವೆ ಎಂದು ಪ್ರತಿಪಾದಿಸಲಾಗಿದೆ. ಸೆಷನ್ಸ್ ಕೋರ್ಟ್ ಮಸೀದಿಯಲ್ಲಿ ಜಂಟಿ ಸಮೀಕ್ಷೆ ನಡೆಸಲು ಸೂಚಿಸಿತ್ತು. ಕೋರ್ಟ್ನಿಂದ ನೇಮಕವಾದ ಸಮಿತಿ ಸಮೀಕ್ಷೆ ನಡೆಸುವಾಗ ನೀರಿನ ಕಾರಂಜಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಮಸೀದಿಯ ಪೂರ್ವ ಭಾಗದ ಗೋಡೆಯಲ್ಲಿ ದೇವರ ವಿಗ್ರಹಗಳಿರುವುದರಿಂದ ಪ್ರಾರ್ಥನೆ ಪೂಜೆಗೆ ಅವಕಾಶ ನೀಡಬೇಕು ಎಂದು ಹಲವು ಹಿಂದು ಮಹಿಳೆಯರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಮಸೀದಿಯಲ್ಲಿ ಪತ್ತೆಯಾಗಿರುವ ಕುರುಹು ದೈವಸ್ವರೂಪಿ ಲಿಂಗವಲ್ಲ. ಬದಲಾಗಿ ನೀರಿನ ಕಾರಂಜಿಯ ನಿರ್ಮಾಣ ಎಂದು ಮಸೀದಿ ವಾದಿಸಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ: ವಾರಣಾಸಿ ಕೋರ್ಟ್ ಆದೇಶ ಎತ್ತಿ ಹಿಡಿದ 'ಸುಪ್ರೀಂ'; ವಿಚಾರಣೆ ಆಕ್ಟೋಬರ್ ಗೆ ಮುಂದೂಡಿಕೆ
ಅಲಹಾಬಾದ್ ಹೈಕೋರ್ಟ್ ಕಳೆದ ವಾರ ಹಿಂದೂ ಅರ್ಜಿದಾರರ ಪೂಜೆಯ ಹಕ್ಕನ್ನು ಕೋರಿ 1991 ರ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 3 ಕ್ಕೆ ಮುಂದೂಡಿದೆ.