ದೇಶ

ಜಾರ್ಖಂಡ್ 'ಕೈ' ಶಾಸಕರ ನಗದು ವಶ ಪ್ರಕರಣ: ದಾಳಿ ನಡೆಸದಂತೆ ದೆಹಲಿ ಪೊಲೀಸರಿಂದ ಬಂಗಾಳ ಸಿಐಡಿಗೆ 'ನಿರ್ಬಂಧ'

Vishwanath S

ಕೋಲ್ಕತ್ತಾ: ಜಾರ್ಖಂಡ್ ನ ಕಾಂಗ್ರೆಸ್ ಶಾಸಕರ ನಗದು ವಶಪಡಿಸಿಕೊಂಡ ಪ್ರಕರಣದಲ್ಲಿ ಬಂಧಿತ ಶಾಸಕರ ಪೈಕಿ ಒಬ್ಬರಿಗೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಶೋಧ ಕಾರ್ಯಾಚರಣೆ ನಡೆಸದಂತೆ ದೆಹಲಿ ಪೊಲೀಸರು ತಮ್ಮ ತಂಡವನ್ನು ನಿರ್ಬಂಧಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಐಡಿ ಹೇಳಿಕೊಂಡಿದೆ.

ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದು, ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ 49 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದರು. 

ಬುಧವಾರ ಬೆಳಗ್ಗೆ ಶೋಧ ಕಾರ್ಯ ನಡೆಸಿದಂತೆ ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ(ಸಿಐಡಿ) ತಂಡವನ್ನು ದೆಹಲಿ ಪೊಲೀಸರು ತಡೆದಿದ್ದಾರೆ. ಜಾರ್ಖಂಡ್ ಶಾಸಕರ ನಗದು ವಶಪಡಿಸಿಕೊಂಡ ಪ್ರಕರಣದ ಆರೋಪಿಯ ವಿರುದ್ಧ ಶೋಧ ಕಾರ್ಯಾಚರಣೆಗೆ ನ್ಯಾಯಾಲಯದ ವಾರಂಟ್ ಇದ್ದರೂ ಈ ದಾಳಿಯನ್ನು ದೆಹಲಿ ಪೊಲೀಸರು ನಿರ್ಬಂಧಿಸಿದ್ದರು. ದೆಹಲಿ ಪೊಲೀಸರ ಈ ನಿರ್ಬಂಧವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಹಿರಿಯ ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ಮೂವರು ಶಾಸಕರಿಂದ ವಶಪಡಿಸಿಕೊಂಡ ಹಣವನ್ನು ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರು ಹವಾಲಾ ಮೂಲಕ ಅವರಿಗೆ ತಲುಪಿಸಿದ್ದಾರೆ ಎಂದು ಸಿಐಡಿ ಈ ಹಿಂದೆ ಹೇಳಿಕೊಂಡಿದೆ.

ಸಿಐಡಿ ನಿನ್ನೆ ಕೋಲ್ಕತ್ತಾದ ಲಾಲ್ಬಜಾರ್ ಪ್ರದೇಶದಲ್ಲಿನ ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾದ ಉದ್ಯಮಿ ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ವೇಳೆ 3 ಲಕ್ಷ ರೂಪಾಯಿ ನಗದು, ಹಲವಾರು ಬ್ಯಾಂಕ್ ಪಾಸ್ ಬುಕ್ ಗಳು ​​ಮತ್ತು ಸುಮಾರು 250 ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದೆ. ಮೂವರು ಶಾಸಕರ ಬಂಧನದ ನಂತರ ಉದ್ಯಮಿ ತಲೆಮರೆಸಿಕೊಂಡಿದ್ದಾರೆ.

ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರದ ಭಾಗವಾಗಿರುವ ಗ್ರ್ಯಾಂಡ್ ಓಲ್ಡ್ ಪಾರ್ಟಿ, ಬಿಜೆಪಿಯು ತಲಾ 10 ಕೋಟಿ ರೂಪಾಯಿ ಮತ್ತು ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೇಮಂತ್ ಸೊರೆನ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಆಪಾದಿತ ಪಿತೂರಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೆಸರನ್ನೂ ಕಾಂಗ್ರೆಸ್ ಎಳೆದಿದೆ. ಆದರೆ ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ನಗದು ದೊರೆತ ನಂತರ ಹಳೆಯ ಪಕ್ಷವು ತನ್ನದೇ ಆದ ಭ್ರಷ್ಟಾಚಾರವನ್ನು ಮರೆಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಂಡಿದೆ.
 

SCROLL FOR NEXT