ದೇಶ

ಕಿಟಕಿಗಳಿಲ್ಲದ ಕೊಠಡಿಯಲ್ಲಿ ನನ್ನನ್ನು ಇರಿಸಲಾಗಿತ್ತು: ಕೋರ್ಟ್ ಗೆ ರಾವತ್ ಹೇಳಿಕೆ 

Srinivas Rao BV

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನಕ್ಕೆ ಒಳಗಾಗಿರುವ ಶಿವಸೇನೆ ನಾಯಕ ಸಂಜಯ್ ರಾವತ್, ತಮ್ಮನ್ನು ಜಾರಿ ನಿರ್ದೇಶನಾಲಯ ಕಿಟಕಿಗಳಿಲ್ಲದ, ಗಾಳಿ ಬೆಳಕು ಇಲ್ಲದ ಕೊಠಡಿಯಲ್ಲಿ ಇರಿಸಿತ್ತು ಎಂದು ಕೋರ್ಟ್ ಗೆ ಹೇಳಿದ್ದಾರೆ. 
 
ಎಂಎಂಎಲ್ಎ ಪ್ರಕರಣಗಳ ವಿಚಾರಣೆಗೆಂದೇ ನಿಯೋಜಿಸಲಾಗಿರುವ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಎಂಜಿ ದೇಶಪಾಂಡೆ ಅವರಿದ್ದ ಪೀಠಕ್ಕೆ ರಾವತ್ ಹೇಳಿದ್ದಾರೆ.ರಾವತ್ ಇಡಿ ವಶದ ಅವಧಿಯನ್ನು ಆ.08 ವರೆಗೂ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ವಿಚಾರಣೆಯ ವೇಳೆ ಜಾರಿ ನಿರ್ದೇಶನಾಲಯದ ವಿರುದ್ಧ ಏನಾದರೂ ದೂರುಗಳಿವೆಯೇ? ಎಂಬ ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾವತ್ ತಮ್ಮನ್ನು ಗಾಳಿ, ಬೆಳಕು, ಕಿಟಕಿಗಳಿಲ್ಲದ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. 

ಇದಕ್ಕೆ ಕೋರ್ಟ್ ಜಾರಿ ನಿರ್ದೇಶನಾಲಯದಿಂದ ವಿವರಣೆ ಕೇಳಿದೆ. ಆದರೆ ಜಾರಿ ನಿರ್ದೇಶನಲಾಯದ ಪರವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಹಿತನ್ ವೆನೆಗಾವ್ಕರ್, ರಾವತ್ ಅವರನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಇರಿಸಲಾಗಿತ್ತು ಅಲ್ಲಿ ಕಿಟಕಿಗಳಿಲ್ಲ ಎಂದು ಹೇಳಿದರು. ಹವಾನಿಯಂತ್ರಣದ ವ್ಯವಸ್ಥೆ ಇದೆಯಾದರೂ ಅದನ್ನು ತಮ್ಮ ಆರೋಗ್ಯ ಕಾರಣಗಳಿಂದಾಗಿ ಉಪಯೋಗಿಸಲು ಸಾಧ್ಯವಿಲ್ಲ ಎಂದು ರಾವತ್ ಕೋರ್ಟ್ ಗೆ ಹೇಳಿದ್ದಾರೆ.ರಾವತ್ ಹೇಳಿಕೆಯ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಇರುವ ಕೊಠಡಿ ನೀಡಲಾಗುವುದು ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಹೇಳಿದೆ. 

SCROLL FOR NEXT