ನವದೆಹಲಿ: ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿ ಪ್ರಕರಣದ ಪ್ರಮುಖ ಆರೋಪಿಯ ನಿವಾಸದ ಮೇಲೆ ಬುಲ್ಡೋಜರ್ ಮೂಲಕ ದಾಳಿ ನಡೆಸಿ, ಅಕ್ರಮ ಕಟ್ಟಡವನ್ನುಕೆಡವಿದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿರುವ ಆರೋಪವನ್ನು ಎದುರಿಸುತ್ತಿರುವ ಶ್ರೀಕಾಂತ್ ತ್ಯಾಗಿ ನಿವಾಸವಿರುವ ಹೌಸಿಂಗ್ ಸೊಸೈಟಿಗೆ ಪೊಲೀಸರೊಂದಿಗೆ ಬಂದ ಅಧಿಕಾರಿಗಳು, ಬುಲ್ಡೋಜರ್ ಮೂಲಕ ಆತ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ್ದರು. ಈತನನ್ನು ಬಿಜೆಪಿಯ ಕಿಸಾನ್ ಮೋರ್ಚಾದ ಸದಸ್ಯ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಇದನ್ನು ನಿರಾಕರಿಸಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
'ನೋಯ್ಡಾದ ಬಿಜೆಪಿ ನಾಯಕನ ನಿರ್ಮಿಸಿರುವುದು ಅಕ್ರಮ ಕಟ್ಟಡ ಎಂದು ಬಿಜೆಪಿ ಸರ್ಕಾರಕ್ಕೆ ಇಷ್ಟು ವರ್ಷಗಳ ಕಾಲ ತಿಳಿದಿರಲಿಲ್ಲವೇ? ಬುಲ್ಡೋಜರ್ ದಾಳಿಯು ನೆಪವಷ್ಟೆ. ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದೆ' ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
'ಮಹಿಳೆಯೊಂದಿಗೆ ಬಹಿರಂಗವಾಗಿ ಅಸಭ್ಯವಾಗಿ ವರ್ತಿಸಲು ಮತ್ತು 10-15 ಗೂಂಡಾಗಳನ್ನು ಕಳುಹಿಸಿ ಆಕೆಗೆ ಬೆದರಿಕೆ ಹಾಕಲು ಧೈರ್ಯವನ್ನು ಆತನಿಗೆ ನೀಡುತ್ತಿರುವವರು ಯಾರು? ಅವರ ಗೂಂಡಾಗಿರಿ ಮತ್ತು ಅಕ್ರಮ ವ್ಯವಹಾರಗಳು ಯಾರ ರಕ್ಷಣೆಯಲ್ಲಿ ಬೆಳೆಯಿತು?. ಆತನನ್ನು ಈವರೆಗೆ ಉಳಿಸಿದವರು ಯಾರು?' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ನಿಂದಿಸಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯನ ನಿವಾಸದ ಮೇಲೆ ಬುಲ್ಡೋಜರ್ ಪ್ರಯೋಗ; ಅಕ್ರಮ ಕಟ್ಟಡ ನೆಲಸಮ
ಇಂದು ನೋಯ್ಡಾದ ಸೆಕ್ಟರ್-93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ಪೊಲೀಸರ ಸಹಾಯದೊಂದಿಗೆ ತಲುಪಿದ ಅಧಿಕಾರಿಗಳು, ತ್ಯಾಗಿ ಅವರ ಆಸ್ತಿಯಲ್ಲಿನ ಅಕ್ರಮ ಕಟ್ಟಡವನ್ನು ಕೆಡವಿದರು.
ನೋಯ್ಡಾ ಪೊಲೀಸರು ತ್ಯಾಗಿ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆತನ ಬಂಧನಕ್ಕೆ ಸುಳಿವು ನೀಡುವವರಿಗೆ ₹ 25,000 ಬಹುಮಾನವನ್ನು ಘೋಷಿಸಿದ್ದಾರೆ.