ದೇಶ

ನೂಪುರ್ ಶರ್ಮಾಗೆ ಜೀವ ಬೆದರಿಕೆ: ದಾಖಲಾಗಿದ್ದ ಎಲ್ಲಾ ಪ್ರಕರಣ ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ

Ramyashree GN

ನವದೆಹಲಿ: ಪ್ರವಾದಿ ಮೊಹಮ್ಮದ್  ಬಗ್ಗೆಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ವಿರುದ್ಧ ದೇಶದ ಇತರೆ ರಾಜ್ಯಗಳಲ್ಲಿ ದಾಖಲಾಗಿದ್ದ ಎಲ್ಲ ಎಫ್ಐಆರ್‌ಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ತನ್ನ ಮೇಲಿರುವ ಪ್ರಕರಣಗಳ ಸಂಬಂಧ ಎಲ್ಲ ಕಡೆಗೂ ತೆರಳಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಹಾಗೂ ತನಗೆ ಜೀವ ಬೆದರಿಕೆ ಇರುವುದರಿಂದ ತನ್ನ ವಿರುದ್ಧದ ಎಲ್ಲ ಪ್ರಕರಣಗಳನ್ನು ಒಂದೆಡೆಗೆ ಸೇರಿಸಬೇಕೆಂದು ನೂಪುರ್‌ ಶರ್ಮಾ ಅವರು ಸುಪ್ರೀಂಗೆ ಮನವಿ ಸಲ್ಲಿಸಿದ್ದರು.

ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ್ದ ಹೇಳಿಕೆಯನ್ನು ಖಂಡಿಸಿ ದೇಶದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಅಷ್ಟೇ ಅಲ್ಲದೆ, ಗಲ್ಫ್ ರಾಷ್ಟ್ರಗಳಿಂದಲೂ ಅಧಿಕೃತ ದೂರುಗಳು ಬಂದ ನಂತರ ಬಿಜೆಪಿ ಅವರನ್ನು ವಕ್ತಾರೆ ಸ್ಥಾನದಿಂದ ವಜಾಗೊಳಿಸಿತ್ತು.

ಈ ಸಂಬಂಧ ನೂಪುರ್ ಶರ್ಮಾ ವಿರುದ್ಧ ದೇಶದ ಅನೇಕ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿವೆ. ಇವುಗಳನ್ನು ಒಂದೆಡೆಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಆಕೆಗೆ ಜೀವ ಬೆದರಿಕೆ ಹಾಕಿರುವುದನ್ನು ಪರಿಗಣಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ತಮ್ಮ ವಿರುದ್ಧ ದೇಶದಾದ್ಯಂತ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನೂ ಒಂದುಗೂಡಿಸಿ ವಿಚಾರಣೆ ನಡೆಸಬೇಕು ಎಂದು ನೂಪುರ್ ಶರ್ಮಾ ಪರ ವಕೀಲರು ಸಲ್ಲಿಸಿದ್ದರು. ಜುಲೈ 1 ರಂದು ನಡೆದ ಅರ್ಜಿ ವಿಚಾರಣೆ ವೇಳೆ, ಉದಯಪುರ ಘಟನೆ ಸೇರಿದಂತೆ ದೇಶದಾದ್ಯಂತ ಭುಗಿಲೆದ್ದ ಎಲ್ಲಾ ಹಿಂಸಾಚಾರಕ್ಕೆ ನೂಪುರ್ ಶರ್ಮಾ ಅವರು ನಾಲಗೆ ಹರಿಬಿಟ್ಟಿದ್ದೇ ಕಾರಣ. ನೂಪುರ್ ಶರ್ಮಾ ತಮ್ಮ ಬೇಜವಾಬ್ದಾರಿ ಮಾತುಗಳಿಂದ ಇಡೀ ದೇಶಕ್ಕೇ ಬೆಂಕಿ ಹಚ್ಚಿದರು ಎಂದು ಸುಪ್ರೀಂ ಕೋರ್ಟ್‌ ಹರಿಹಾಯ್ದಿತ್ತು.

SCROLL FOR NEXT