ದೇಶ

'ಕಾಲುಗಳನ್ನು ಮುರಿಯಿರಿ, ಜಾಮೀನು ನಾನು ಕೊಡಿಸುತ್ತೇನೆ' ಎಂದ ಏಕನಾಥ್ ಶಿಂಧೆ ತಂಡದ ಶಾಸಕ

Ramyashree GN

ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಶಿವಸೇನೆಯ ಶಾಸಕರಲ್ಲಿ ಒಬ್ಬರಾದ ಶಾಸಕ ಪ್ರಕಾಶ್ ಸುರ್ವೆ ವಿರುದ್ಧ ಉದ್ಧವ್ ಠಾಕ್ರೆ ಅವರ ಶಿವಸೇನೆ ಪೊಲೀಸರಿಗೆ ದೂರು ನೀಡಿದೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ 'ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲನ್ನು ಮುರಿಯಿರಿ. ನಾನು ನಿಮಗೆ ಜಾಮೀನು ಕೊಡಲು ಮರುದಿನ ಬರುತ್ತೇನೆ' ಎಂದಿರುವುದು ವಿವಾದಕ್ಕೆ ಕಾರಣವಾಗಿದೆ.

ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಗೊಳಿಸಲು ಶಿಂಧೆಯವರ ಟೀಂನಲ್ಲಿದ್ದ ಸುರ್ವೆ, ನಿಜವಾದ ಶಿವಸೇನೆ ಯಾವುದು ಅದು ಠಾಕ್ರೆ ನೇತೃತ್ವದ ಶಿವಸೇನೆಯಾ ಅಥವಾ ಶಿಂಧೆ ಬಣದ ಶಿವಸೇನೆಯಾ ಎಂಬ ಕುರಿತು ಸ್ಪಷ್ಟವಾಗಿ ಮಾತನಾಡುತ್ತಿದ್ದರು.

ಸುರ್ವೆ ಅವರ ಭಾಷಣದ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರು ಆ. 14 ರಂದು ಮುಂಬೈನ ಮಗಥಾಣೆ ಪ್ರದೇಶದ ಕೊಕನಿ ಪದ ಬುದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

'ಯಾರಾದರೂ ನಿಮಗೆ ಏನಾದರೂ ಹೇಳಿದರೆ ಅವರಿಗೆ ಸರಿಯಾಗಿ ಉತ್ತರಿಸಿ. ಯಾರ ದಾದಾಗಿರಿಯನ್ನು ಸಹಿಸಿಕೊಳ್ಳದಿರಿ. ನೀವು ಅವರಿಗೆ ಹೊಡೆಯಿರಿ. ಆಗ ನಾನು, ನಾನು, ಪ್ರಕಾಶ್ ಸುರ್ವೆ ನಿಮಗಾಗಿ ಇಲ್ಲಿದ್ದೇನೆ. ನೀವು ಅವರ ತೋಳುಗಳನ್ನು ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲುಗಳನ್ನು ಮುರಿಯಿರಿ. ಮರುದಿನ ನಾನು ನಿಮಗೆ ಜಾಮೀನು ನೀಡುತ್ತೇನೆ, ಚಿಂತಿಸಬೇಡಿ' ಎಂದು ಮಗಠಾಣೆ ಕ್ಷೇತ್ರದ ಶಾಸಕರು ತಮ್ಮ ಬೆಂಬಲಿಗರಿಗೆ ಹೇಳಿದರು.

ಮುಂದುವರಿದು, 'ನಾವು ಯಾರೊಂದಿಗೂ ಜಗಳವಾಡುವುದಿಲ್ಲ; ಆದರೆ ಯಾರಾದರೂ ನಮ್ಮೊಂದಿಗೆ ಜಗಳವಾಡಿದರೆ, ನಾವು ಅವರನ್ನು ಬಿಡುವುದಿಲ್ಲ' ಎಂದರು.

ಸುರ್ವೆ ಅವರ ಈ ಹೇಳಿಕೆಯನ್ನು ಖಂಡಿಸಿ ಇದೀಗ ಠಾಕ್ರೆ ಬಣವು ದಹಿಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಸದ್ಯ ಉದ್ಧವ್ ಠಾಕ್ರೆ ಅವರ ತಂದೆ ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮುಖ್ಯಸ್ಥರಾಗಿ ಉಳಿದಿದ್ದಾರೆ. ಆದರೆ ಪಕ್ಷದ ಹಕ್ಕು ಯಾರಿಗೆ ಸಿಗುತ್ತದೆ ಎಂಬ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ. ಈ ವಿಚಾರವು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಅಂಗಳದಲ್ಲಿದೆ.

ಬಿಜೆಪಿ ಬೆಂಬಲದೊಂದಿಗೆ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ಅವರ ಸರ್ಕಾರವನ್ನು ಕೆಡವಲು ಜೂನ್‌ನಲ್ಲಿ ಬಹುತೇಕ ಶಿವಸೇನಾ ಶಾಸಕರನ್ನು ಕರೆದೊಯ್ದರು. ಪಕ್ಷದ ಮೂರನೇ ಎರಡರಷ್ಟು ಶಾಸಕರು ತಮ್ಮೊಂದಿಗೆ ಇರುವುದರಿಂದ, ಅವರು ವಿಧಾನಸಭೆಯಲ್ಲಿಯೂ ತಮ್ಮ ಬಣವನ್ನು ಶಿವಸೇನೆ ಎಂದು ಗುರುತಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

SCROLL FOR NEXT