ದೇಶ

ತನಿಖೆ ಎದುರಿಸಲು ಸಿದ್ಧ, ಯಾವುದೇ ಹಿಂಜರಿಕೆ ಇಲ್ಲ; ಇದು ಬಿಜೆಪಿ ಸರ್ಕಾರದ ಕುತಂತ್ರ: ತೆಲಂಗಾಣ ಸಿಎಂ ಪುತ್ರಿ ಕವಿತಾ

Sumana Upadhyaya

ತೆಲಂಗಾಣ: ದೆಹಲಿ ಅಬಕಾರಿ ನೀತಿ ಹಗರಣ ಮತ್ತೊಮ್ಮೆ ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಜಾರಿ ನಿರ್ದೇಶನಾಲಯ ಸ್ಥಳೀಯ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರಿ ವಿಧಾನ ಪರಿಷತ್ ಸದಸ್ಯೆ ಕವಿತಾ ಹೆಸರಿದೆ.

ಇದಕ್ಕೆ ಸಂಬಂಧಪಟ್ಟಂತೆ ಇಂದು ಪ್ರತಿಕ್ರಿಯೆ ನೀಡಿರುವ ಕವಿತಾ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತಮ್ಮ ಅಧಿಕಾರದಿಂದ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಪ್ರತಿಪಕ್ಷಗಳದ್ದು. ಇದೇ ಧಾಟಿಯಲ್ಲಿ ಇಂದು ಆರೋಪ ಮಾಡಿರುವ ಕವಿತಾ, ಪ್ರಧಾನಿ ಮೋದಿ ನಮ್ಮನ್ನು ಜೈಲಿಗಟ್ಟಬಹುದು. ಆದರೂ ನಾವು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆ ಮುಂದೆ ತೋರಿಸಿ ಜನಪರ ಕೆಲಸಗಳನ್ನು ಮಾಡುವುದನ್ನು ಬಿಡುವುದಿಲ್ಲ. ತೆಲಂಗಾಣದಲ್ಲಿ ಟಿಆರ್ ಎಸ್ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ರಾಜ್ಯ ಸರ್ಕಾರವನ್ನು ಬೀಳಿಸಲು ಮೋದಿ ಮತ್ತು ಅವರ ಬಿಜೆಪಿ ತಂಡ ಹೂಡಿದ್ದ ಪಿತೂರಿಯನ್ನು ನಾವು ಬಹಿರಂಗಪಡಿಸಿದ್ದೇವೆ , ಅದಕ್ಕಾಗಿ ನಮಗೆ ಕಿರುಕುಳ ನೀಡಲಾಗುತ್ತಿದೆ ಎಂದರು.

8 ವರ್ಷಗಳ ಹಿಂದೆ ಬಂದ ಬಿಜೆಪಿ ಸರ್ಕಾರ ಈ 8 ವರ್ಷಗಳಲ್ಲಿ 9 ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ತನ್ನ ಸರ್ಕಾರಗಳನ್ನು ಅನುಚಿತ ರೀತಿಯಲ್ಲಿ ರಚಿಸಿತು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಧಾನಿ ಮೋದಿಯವರಿಗೂ ಮುನ್ನ ಇಡಿ ಆಗಮಿಸುತ್ತದೆ ಎಂಬುದು ದೇಶದ ಪ್ರತಿ ಮಗುವಿಗೆ ತಿಳಿದಿದೆ. ತೆಲಂಗಾಣದಲ್ಲಿ ಇದು ನಡೆಸಲು ಪ್ರಯತ್ನ ನಡೆಯುತ್ತಿದೆ. 

ಮುಂದಿನ ವರ್ಷ ಚುನಾವಣೆ ಇರುವುದರಿಂದ ತೆಲಂಗಾಣದಲ್ಲೂ ಅದೇ ಆಗುತ್ತಿದೆ, ರಾಜ್ಯದಲ್ಲಿ ಪ್ರಧಾನಿ ಮೋದಿಯವರಿಗಿಂತ ಮುಂಚೆಯೇ ಇಡಿ ಬಂದಿದೆ. ನಾವು ಅವರನ್ನು ಸ್ವಾಗತಿಸಿದ್ದೇವೆ ವಿಚಾರಣೆಗೆ ಅವರಿಗೆ ಸಹಕರಿಸುತ್ತೇವೆ, ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.

ಹಗಣದ ಬಗ್ಗೆ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ದಳಿದ್ದೇನೆ ಎಂದು ಸವಾಲು ಹಾಕಿದರು. 

SCROLL FOR NEXT